ಮೂಡುಬಿದಿರೆ: ಕಾರ್ಕಳದ ಕರಿಯಕಲ್ಲು ಎಂಬಲ್ಲಿ ಆಟೋ ರಿಕ್ಷಾ ಮತ್ತು ಬೈಕ್ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ, ಆಟೋ ಚಾಲಕ ಗುರುವಾರ ರಾತ್ರಿ ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೂಡುಬಿದಿರೆ ಬೆಳುವಾಯಿ ಕುಕ್ಕುಡೇಲು ನಿವಾಸಿ ವಿಜಯ ಶೆಟ್ಟಿ (57) ಮೃತಪಟ್ಟವರು.
ವಿಜಯ ಶೆಟ್ಟಿಯವರು ತನ್ನ ಆಟೋ ರಿಕ್ಷಾದಲ್ಲಿ ಬಜಗೋಳಿಯಲ್ಲಿ ನಡೆದ ಸಂಬಂಧಿಕರ ಮಗುವಿನ ನಾಮಕರಣಕ್ಕೆ ಭಾಗವಹಿಸಿ ಹಿಂತಿರುಗುತ್ತಿದ್ದ ಸಂದರ್ಭ ಕರಿಯಕಲ್ಲು ಎಂಬಲ್ಲಿ ಆಟೋ ರಿಕ್ಷಾ ಬೈಕ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಆಟೋದಲ್ಲಿದ್ದ ವಿಜಯ ಶೆಟ್ಟಿಯವರ ಅಣ್ಣನ ಮಗಳು, ಮೂಡುಬಿದಿರೆ ಪುರಸಭೆ ಸದಸ್ಯೆ ಸೌಮ್ಯಾ ಶೆಟ್ಟಿ ಮತ್ತು ಆಕೆಯ ಪುತ್ರ ಹಾಗೂ ವಿಜಯ ಶೆಟ್ಟಿ ಪುತ್ರಿ ಗಾಯಗೊಂಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭ ಖಾಸಗಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ ಶೆಟ್ಟಿ ಮಧ್ಯಾಹ್ನ ಕರ್ತವ್ಯ ನಿರತರಾಗಿದ್ದಾಗಲೇ ಬೆಳುವಾಯಿ ಚರ್ಚ್ ಬಳಿಯ ಶಾಲೆಯ ಮತಗಟ್ಟೆ ಬಳಿ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಮತದಾನಗೈದಿದ್ದರು. ತನ್ನ ಮತ ನರೇಂದ್ರ ಮೋದಿಯವರ ಮರು ಆಯ್ಕೆಗಾಗಿ ಎಂದು ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚುನಾವಣೆ ಸಂದರ್ಭ ವೈರಲ್ ಆಗಿತ್ತು. ವಿಜಯ ಶೆಟ್ಟಿ ಅವರು ಪತ್ನಿ, ಈರ್ವರು ಮಕ್ಕಳನ್ನು ಅಗಲಿದ್ದಾರೆ.