ಮೈಸೂರು: ಕೆಎಸ್ಆರ್ಟಿಸಿ ಬಸ್ಸನಲ್ಲಿ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಅದನ್ನು ಹುಡುಕಿಕೊಂಡು ಆ ಮಹಿಳೆ ಡಿಪೋವರೆಗೆ ಬಂದಾಗ ಈ ಚಾಲಕ ಹಾಗೂ ನಿರ್ವಾಹಕರು ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ.
ಈ ಘಟನೆ ನಡೆದದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ-ನಿರ್ವಾಹಕರಾದ ತಾಂಡವಮೂರ್ತಿ ಹಾಗೂ ಆರ್.ಪಿ.ಶಿವಕುಮಾರ್ಗೆ ಈ ಮಹಿಳೆಯ ಚಿನ್ನದ ಸರ ಸಿಕ್ಕಿತ್ತು.
ಇದನ್ನೂ ಓದಿ: ನಕಲಿ ಮಾಂಗಲ್ಯ ಸರವಿಟ್ಟು ಅಸಲಿ ಕದ್ದವಳ ಸೆರೆ
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುಮ ಎಂಬುವವರು ಇತ್ತೀಚೆಗೆ ನಂಜನಗೂಡಿನಿಂದ ಚಾಮರಾಜನಗರಕ್ಕೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಚಿನ್ನದ ಸರ ಕಳೆದುಕೊಂಡಿದ್ದರು. ಅವರು ಕುಳಿತಿದ್ದ ಸೀಟಿನ ಕೆಳಗೆಯೇ ಮಾಂಗಲ್ಯದ ಸರ ಬಿದ್ದಿತ್ತು. ತಮ್ಮ ವಾಹನದಲ್ಲಿ ಸರ ಪತ್ತೆ ಆಗುತ್ತಿದ್ದಂತೆಯೇ ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರು ಡಿಪೋಗೆ ಮಾಹಿತಿ ನೀಡಿದ್ದರು.
ಇದಾಗುತ್ತಿದ್ದಂತೆಯೇ ಬಸ್ನಲ್ಲಿ ಸರ ಬಿದ್ದಿರಬಹುದು ಎಂದು ಡಿಪೋಗೆ ಸುಮ ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಸುಮಗೆ ಚಾಲಕ ನಿರ್ವಾಹಕ ಮಾಂಗಲ್ಯ ಸರ ವಾಪಸ್ಸು ನೀಡಿದ್ದಾರೆ.