ಮಂಗಳೂರು: ಪಚ್ಚನಾಡಿ ತ್ಯಾಜ್ಯ ಕುಸಿತದ ಪರಿಸರದ ನಿವಾಸಿಗಳಿಗೆ ಕೃಷಿ ಹಾಗು ಕುಡಿಯಲು ನೀರಿನ ಸಮಸ್ಯೆ ಇದೆ. ಸ್ಥಳೀಯರನ್ನು ವಿಚಾರಿಸಿದಾಗ ಈ ವಿಷಯ ಗಮನಕ್ಕೆ ಬಂದಿದ್ದು, ಶೀಘ್ರ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವುದಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎ.ಜಿ.ಶಿಲ್ಪಾ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಧೀಶರು ಮತ್ತು ಪ್ಯಾನೆಲ್ ವಕೀಲರ ನಿಯೋಗ ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶಕ್ಕೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದೆ.
ಹೈಕೋರ್ಟ್ ನಿರ್ದೇಶನದಂತೆ, ಪಚ್ಚನಾಡಿ ತ್ಯಾಜ್ಯ ದುರಂತ ಪ್ರದೇಶದಲ್ಲಿರುವ ಮನೆಗಳಿಗೆ ಮನಪಾ ಮೂಲಸೌಕರ್ಯ ಒದಗಿಸಿದೆಯೇ ಎಂಬುದನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆಯಲಾಯಿತು.
ಈ ಸಂದರ್ಭ ಮಾತನಾಡಿದ ನ್ಯಾ.ಶಿಲ್ಪಾ, ಪಚ್ಚನಾಡಿ ದುರಂತ ಪ್ರದೇಶದಲ್ಲಿ ಕೃಷಿ ಉದ್ದೇಶದ ಬಳಕೆಗೆ ಸಮರ್ಪಕ ನೀರಿಲ್ಲ. ಕುಡಿಯಲು ಕೂಡ ಸಮಸ್ಯೆ ಇದೆ ಎಂದು ಉಲ್ಲೇಖಿಸಲಾಗಿತ್ತು. ಈ ಸಂದರ್ಭದಲ್ಲಿ ಮನಪಾ ಸಲ್ಲಿಸಿದ ಅಪಿಧವಿತ್ನಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ನೀರು ಪೂರೈಸುತ್ತಿದ್ದೇವೆ. ಬೇಸಗೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡುತ್ತೇವೆ ಎಂದು ವಿವರಿಸಿದ್ದರು. ಹೀಗಾಗಿ ಈಗ ಪರಿಶೀಲನೆ ಮಾಡಿದ್ದೇವೆ. ಸ್ಥಳೀಯರ ಬಳಿ ವಿಚಾರಿಸಿದಾಗ ನೀರಿನ ಸಮಸ್ಯೆ ಇರುವುದು ಕಂಡುಬಂದಿದೆ ಎಂದವರು ತಿಳಿಸಿದರು.
ನಿಯೋಗದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ, ಲೀಗಲ್ ಅಥಾರಿಟಿ ಪ್ಯಾನೆಲ್ನ ವಕೀಲ ಚಂದ್ರಹಾಸ ಕೊಟ್ಟಾರಿ, ಪಾಲಿಕೆ ಸದಸ್ಯೆ ಸಂಗೀತಾ ಆರ್. ನಾಯಕ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.