ಜಗಳೂರು : ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಂಡರೆ ಕಂಡ ಕನಸಿನ ಗುರಿ ಮುಟ್ಟಲು ಸಾಧ್ಯ ಎಂದು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಹೇಳಿದರು.
ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಬೆಳಕಿಲ್ಲದಿದ್ದರೆ ನಡೆಯಬಹುದು, ಕನಸೇ ಇಲ್ಲದಿದ್ದರೆ ಗುರಿ ಮುಟ್ಟಲು ಹೇಗೆ ಸಾಧ್ಯ. ಕನಸು ನನಸಾಗಿ ಜಿಲ್ಲಾಧಿಕಾರಿ, ಎಸ್ಪಿ ಇನ್ನಿತರ ಹುದ್ದೆಗಳನ್ನು ಅಲಂಕರಿಸಿದಾಗ ಸನ್ಮಾನಕ್ಕೆ ಬಾಧ್ಯರಾಗುತ್ತೇವೆ ಎಂದು ತಿಳಿಸಿದರು.
ದೇಶಕ್ಕೆ ಸೇವೆ ಮಾಡುವ ಇಂಜಿನಿಯರ್ಗಳು, ವೈದ್ಯರು ಬೇಕೇ ಹೊರತು ತಮ್ಮ ಸ್ವಾರ್ಥಕ್ಕಾಗಿ ಬೇರೆ ದೇಶಗಳಿಗೆ ಹೋಗಿ ಬದುಕುವವರು ಬೇಕಾಗಿಲ್ಲ ಎಂದರು.
ಜ್ಞಾನ ತರಂಗಿಣಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಿ.ಎಸ್. ಅರವಿಂದ್ ಮಾತನಾಡಿ, ಮೊಬೈಲ್ನಲ್ಲಿ ವಿದ್ಯಾರ್ಥಿಗಳು ಬಹುತೇಕ ಸಮಯ ಕಳೆಯುತ್ತಿದ್ದು, ಓದಿನಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿಯರಾದ ಹಿಮಚೈತ್ರ ಮತ್ತು ಸುಮತಿ ಭರತನಾಟ್ಯ ಪ್ರದರ್ಶಿಸಿದರು. ಪ್ರಾಚಾರ್ಯ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ವಿಜಯ ಸಂಕೇಶ್ವರರ ಸಾಧನೆ ಗುಣಗಾನ
ವಿಜಯ ಸಂಕೇಶ್ವರ್ ಇಂದು ಸಾಧಕರ ಸ್ಥಾನದಲ್ಲಿದ್ದಾರೆ. ಓದಿದ್ದು ಕಡಿಮೆಯಾದರೂ ಸಾಧನೆಯ ಶಿಖರವೇರಿದ್ದಾರೆ. ಒಂದು ಲಾರಿಯನ್ನಿಟ್ಟುಕೊಂಡು ವ್ಯವಹಾರ ಆರಂಭಿಸಿದ ಸಂಕೇಶ್ವರ ಅವರು ಇಂದು ವಿಆರ್ಎಲ್ ಸಂಸ್ಥೆಯ ಮೂಲಕ ಸಾವಿರಾರು ಲಾರಿ, ಬಸ್ಗಳನ್ನು ಹೊಂದಿದ್ದಾರೆ. ಅಲ್ಲದೇ ಪತ್ರಿಕಾ ರಂಗದಲ್ಲೂ ಸಾಧನೆ ಮಾಡಿ ಗುರಿ ಮುಟ್ಟಿದ್ದಾರೆ ಎಂದು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಸ್ಮರಿಸಿದರು.