ವಿಜಯಪುರ: ಇಂಡಿ ತಾಲೂಕಿನ ಗೂಗಿಹಾಳ ಕೆರೆಯಿಂದ ಕಡೆಹಳ್ಳಿಯಾದ ಮಿರಗಿ ಗ್ರಾಮದ ಹೊಳೆಯವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಬಣದ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ, ಮಿರಗಿ, ಗೊಳಸಾರ ಮತ್ತು ನಾದ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿ ಅವು ಸಾಯುವ ಹಂತಕ್ಕೆ ಬಂದು ನಿಂತಿವೆ.
ಈಗಾಗಲೇ ಅಲ್ಲಿನ ಅಧಿಕಾರಿಗಳಿಗೆ ಈ ವಿಷಯ ಮನವರಿಕೆ ಮಾಡಿದರು ಕೂಡಾ ಮಿರಗಿ ಗ್ರಾಮದವರೆಗೆ ನೀರು ಹರಿಸಿಲ್ಲ. ಇನ್ನು ಕುಡಿಯುವ ನೀರಿಗಾಗಿ ನಿತ್ಯ ನಾಲ್ಕೆದು ಕಿ.ಮೀ. ಅಲೆದು ನೀರು ತರುವ ಸ್ಥಿತಿ ಬಂದಿದೆ. ಕೂಡಲೇ, ಇಲ್ಲಿನ ಜಾನುವಾರುಗಳು ಜೀವನ ಉಳಿಸಲು ಗೂಗಿಹಾಳ ಕೆರೆಯಿಂದ ಮಿರಗಿ ಭೀಮಾ ನದಿಯ ಹೊಳೆಯವರೆಗೆ ನೀರು ಹರಿಸುವಂತೆ ಆಗ್ರಹಿಸಿದರು.
ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಿದರೂ ಅದಕ್ಕೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಕೇವಲ ನಾದ ಮತ್ತು ಗೊಳಸಾರ ನೀರು ಬಿಟ್ಟಿದ್ದು, ಅಲ್ಲಿನ ಜನ ಗೇಟ್ ಬಂದ್ ಮಾಡಿ ನೀರು ಮುಂದು ಹೋಗಲು ಬಿಟ್ಟಿಲ್ಲ.
ಆದ್ದರಿಂದ ಕೊನೆಯ ಅಂಚಿನವರೆಗೂ ನೀರು ಹರೆಸುವ ಜವಾಬ್ದಾರಿ ಅಲ್ಲಿನ ಅಧಿಕಾರಿಗಳು ವಹಿಸಿಕೊಂಡು ಬೇಸಿಗೆಯಲ್ಲಿ ಜನ ಮತ್ತು ಜಾನುವಾರಗಳ ಜೀವ ರಕ್ಷಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದರು.
ರಾಜಕುಮಾರ ಕುಂಬಾರ, ಅರವಿಂದ ಕುಲಕರ್ಣಿ, ವಿಠೋಭಾ ಅಂಬಾಲೆ, ಲಿಂಗರಾಜ ಬಿದರಕುಂದಿ, ವಿರೇಶ ಬಾಗೇವಾಡಿ, ಶಿವಪ್ಪ ಕುಂಬಾರ, ಮಲ್ಲಿಕಾರ್ಜುನ ಮಠಪತಿ, ರಾವೇಂದ್ರ ಹಡಪದ, ಪ್ರಭು ಮಂಖನಿ, ಸಿದ್ರಾಮ ಹಳ್ಳೂರ, ರಾಜು ಕಾಂಬಳೆ, ಬಸವರಾಜ ಕಿಸಕಿ, ಶಂಕರ ಯಾದವಾಡ ಮತ್ತಿತರರಿದ್ದರು.