More

    ಎಲ್ಲದರಲ್ಲೂ ಬೇಡ ಅನ್ಯರ ಹೋಲಿಕೆ ಜೀವನದಲ್ಲಿ ಇರಲಿ ಸ್ವಂತಿಕೆ

    Hello Doctor ಅವರು ತುಂಬಾ ದೂರದ ಬಿಸಿಲುನಾಡಿನಿಂದ ಬಂದಿದ್ದರು. ಒಪಿಡಿಯಲ್ಲಿ ಗದ್ದಲ ಕೂಡ ಬಹಳ ಇತ್ತು. ಅವರಿಗೆ ಬೇಗ ಪ್ರವೇಶ ದೊರೆಯಬೇಕೆನ್ನುವ ಧಾವಂತ. ನಾನು ಅದನ್ನು ಗಮನಿಸಿದೆ. ಒಂದು ಕ್ಷಣ ನಿಂತು ‘ಯಾಕೆ? ಏನು ಅವಸರ? ಏನು ನಿಮ್ಮ ಸಮಸ್ಯೆ?’ ಎಂದು ಕೇಳಿದೆ. ಸ್ವಲ್ಪ ಅರ್ಜೆಟ್ ಇತ್ತು ಸಾರ್. ಪ್ಲೀಸ್ ಎಂದು ಗೋಗರೆದರು. ಆಯಿತು ಬನ್ನಿ ಎಂದು ಕರೆದೊಯ್ದೆ.

    ಅವರದು ಮಧ್ಯಮವರ್ಗದ ಕುಟುಂಬ. ಗಡಿನಾಡು ಕಲಬುರಗಿಯಿಂದ ಬಂದಿದ್ದರು. ‘ಯಾರಿಗೆ ಏನಾಗಿದೆ?’ ಎಂದೆ. ಅದಕ್ಕೆ ಪ್ರತಿಯಾಗಿ ಅವರು ‘ನಮ್ಮ ಆರೋಗ್ಯಕ್ಕೆ ಏನೂ ಆಗಿಲ್ಲ ಸರ್. ನಮಗೆ ಎದುರಾಗಿರೋದು ನಮ್ಮ ಮಗನ ಭವಿಷ್ಯದ ಚಿಂತೆ. ಇರುವವ ಒಬ್ಬನೇ ಮಗ. ಅವನ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗದಿದ್ದರೂ ತಕ್ಕ ಮಟ್ಟಿಗೆ ಪೂರೈಸಿದ್ದೇವೆ. ಆದರೆ ಆತನ ಕೆಲ ಬೇಡಿಕೆಗಳು ನಮ್ಮ ಇತಿಮಿತಿ ಮತ್ತು ಕೈ ಮೀರಿವೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರಿ ಆತನ ಬೇಡಿಕೆಗಳೇನು ಹೇಳಿ ಅಂದೆ.

    ‘ಆತ ಓದಿನಲ್ಲಿ ಪರವಾಗಿಲ್ಲ. ತೀರಾ ದಡ್ಡನೂ ಅಲ್ಲ, ತುಂಬಾ ಬುದ್ಧಿವಂತನೂ ಅಲ್ಲ. ಆದರೆ ಚಂಚಲ ಮನಸ್ಸು. ಬಾಹ್ಯ ಲೌಕಿಕ ಪ್ರಪಂಚದ ಬಗ್ಗೆ ತುಂಬಾ ಜ್ಞಾನ ಇದೆ. ಆದರೆ ಓದಿನಲ್ಲಿ ಅದೇಕೋ ಆಸಕ್ತಿ ತೋರುತ್ತಿಲ್ಲ. ಅವರ ಸ್ಕೂಲ್ ಮೇಷ್ಟು›, ಹಿತೈಷಿಗಳು, ಸ್ನೇಹಿತರು ಹೀಗೆ ಎಲ್ಲರ ಕಡೆಯಿಂದಲೂ ಬುದ್ಧಿವಾದ ಹೇಳಿಸಿದೆವು. ಹೂಂ ಅಂತಾನೆ. ಆದರೆ ಮರುಕ್ಷಣ ಮತ್ತದೇ ರಾಗ ಅದೇ ಹಾಡು. ಇವರದೇ ಆದ ಒಂದು ಸ್ನೇಹಿತರ ವಲಯವಿದೆ. ಅದರಲ್ಲಿ ಶ್ರೀಮಂತರೇ ಹೆಚ್ಚು. ಅವರೊಡನೆ ಹೋಲಿಸಿಕೊಳ್ಳುತ್ತಾನೆ. ಅವರಂತೆ ತನ್ನ ಜೀವನಶೈಲಿ ಬಯಸುತ್ತಾನೆ. ಇದರಲ್ಲಿ ಬಹುಪಾಲು ನಮ್ಮಿಂದಾಗದು ಎಂದು ತಿಳಿ ಹೇಳಿದೆವು. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾನೆ. ಇರೋದು ಒಬ್ಬ ಮಗ ಅಷ್ಟೂ ಖರ್ಚು ಮಾಡೋಕೆ ಆಗಲ್ವಾ ಎಂದು ವಾದಕ್ಕಿಳಿಯುತ್ತಾನೆ. ನಮಗೂ ಒಮ್ಮೊಮ್ಮೆ ಬೇಸರವಾಗುತ್ತದೆ ಎಂದು ಕಣ್ಣಲ್ಲಿ ನೀರು ತಂದುಕೊಂಡರು. ಆದರೂ ಕೈಲಾದಷ್ಟು ಆತನ ಬೇಡಿಕ ಪೂರೈಸಿ ಪಿಯುಸಿ ಓದಿಸಿದ್ದೇವೆ. ಆತನೂ ತನ್ನ ಸಾಮರ್ಥ್ಯಕ್ಕನುಸಾರ 70% ಫಲಿತಾಂಶ ತೆಗೆದಿದ್ದಾನೆ. ಆತನ ಸ್ನೇಹಿತರೆಲ್ಲರೂ ದೊಡ್ಡ ದೊಡ್ಡ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಈತನ ರಿಸಲ್ಟ್​ಗೆ ನಾವು ಆತನನ್ನು ಅವರ ಜತೆ ಸೇರಿಸೋದು ಕಷ್ಟಸಾಧ್ಯ. ಆದರೆ ಆತ ಕಲಿತರೆ ಅದೇ ಕಾಲೇಜಿನಲ್ಲಿ, ಇಲ್ಲದಿದ್ದರೆ ಹೋಗುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾನೆ. ನಮ್ಮ ಕೈಯಲ್ಲಿ ಈ ಟಾಸ್ಕ್ ಆಗದ ಮಾತು. ಏನು ಮಾಡೋದು ತಿಳಿಯದಾಗಿದೆ. ನಿಮ್ಮ ಹತ್ತಿರ ಕರೆದುಕೊಂಡು ಬರೋಣ ಅಂದರೆ ಆತ ಬರಲಿಲ್ಲ. ನಾವೇ ಬಂದು ಸಲಹೆ ಪಡೆಯೋಣ ಅಂತಾ ಬಂದೆವು’ ಎಂದರು.

    ಆತನಿಗೆ ಫೋನ್ ಮಾಡಿ ಕೊಡಿ ಎಂದೆ. ಅವರು ಕರೆ ಮಾಡಿದರು. ಏನಪಾ 70% ಮಾಡಿದ್ದಿಯಲ್ಲೋ, ವೆರಿ ಗುಡ್. ಮುಂದೇನು ಓದಬೇಕು ಅಂದ್ಕೊಂಡಿದ್ದೀಯಾ? ಎಂದು ಕೇಳಿದೆ. ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಬೇಕು ಅಂದುಕೊಂಡಿರುವೆ, ಅದೂ ಬೆಂಗಳೂರಲ್ಲಿ, ಸ್ನೇಹಿತರೊಡನೆ ಎಂದ. ಅದಕ್ಕೆ ಪ್ರತಿಯಾಗಿ ನಾನವನಿಗೆ ಹೇಳಿದ್ದು ಇಷ್ಟೇ: ನೋಡು ಇಂಥದ್ದೇ ಕಾಲೇಜಿನಲ್ಲಿ ಓದುವ ಗುರಿ ಸರಿ. ಆದರೆ ಅದಕ್ಕೆ ಪೂರಕವಾಗಿ ನಮ್ಮ ಸಾಮರ್ಥ್ಯವೂ ಅಗತ್ಯ. ಸ್ನೇಹಿತರು ಆ ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತಾರೆ ಎಂದುಕೊಂಡು ನಾವೂ ಅಲ್ಲೇ ಓದಲು ಬಯಸುವುದು ಅಸಮಂಜಸ. ನಿನ್ನ ಪಾಲಕರು ನಿನಗಾಗಿ ಅದೆಷ್ಟು ಕಷ್ಟಪಟ್ಟು ಇಲ್ಲಿವರೆಗೆ ಓದಿಸಿದ್ದಾರೆ.

    ಇನ್ನು ಮುಂದೆಯೂ ಓದಿಸುತ್ತಾರೆ. ಅವರ ಶ್ರಮ ಹಾಗೂ ಇತಿಮಿತಿ ಅರ್ಥ ಮಾಡಿಕೊ. ಕಲಿಯುವ ಕಾಲೇಜು ಅಷ್ಟೊಂದು ಮುಖ್ಯವಲ್ಲ. ಕಲಿಕೆ ಮುಖ್ಯ. ಸರ್ಕಾರಿ ಕಾಲೇಜಿನಲ್ಲೇ ಇದ್ದು ಓದಿ ಸಾಧನೆ ಮಾಡಿದವರು ಅದೆಷ್ಟು ಜನ ಇಲ್ಲಾ ಹೇಳು. ಒಂದೊಮ್ಮೆ ಅವರತ್ತ ನೋಡು. ಜೀವನದ ಬೆಲೆ ಅರಿವಾಗುತ್ತದೆ. ಇಲ್ಲಿ ನಮ್ಮ ಪರಿಶ್ರಮ ಫಲ ನೀಡುತ್ತದೆ ಹೊರತು ಕಾಲೇಜಿನ ಕಟ್ಟಡ, ಸಿರಿವಂತ ಸ್ನೇಹಿತರಲ್ಲ ಎಂದೆ. ನನ್ನ ಮಾತು ಆರಂಭದಲ್ಲಿ ಇಷ್ಟವಾಗದೇ ಹೋದರೂ ಕೊನೆಗೆ ಆತನಿಗೆ ಜ್ಞಾನೋದಯವಾಯಿತು. ‘ಹೌದು ಸರ್ ನಿಮ್ಮ ಮಾತು ನಿಜ. ಈಗ ವಾಸ್ತವ ಅರಿವಾಗಿದೆ. ತಪ್ಪಾಯಿತು ಸರ್. ಹೆತ್ತವರ ಮನ ನೋಯಿಸಲಾರೆ. ಅವರಿಗೆ ಕೀರ್ತಿ ತರುವ ಅವರು ಹೆಮ್ಮೆ ಪಡುವ ಕೆಲಸ ಮಾಡುವೆ’ ಎಂದ.

    ಇಲ್ಲಿ ಈ ಪ್ರಕರಣ ನೆಪದಲ್ಲಿಟ್ಟುಕೊಂಡು ನಾನು ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಹೇಳ ಬಯಸುವುದು ಇಷ್ಟೇ: ಹೆತ್ತವರ ಮನ ನೋಯಿಸಿ ಅವರಿಗೆ ತೊಂದರೆ ಕೊಟ್ಟು ಬೇರೆಯವರೊಂದಿಗೆ ಹೋಲಿಸಿಕೊಂಡು ನಿಮ್ಮ ಶೈಕ್ಷಣಿಕ ಜೀವನ ಸಾಗಿಸಬೇಡಿ. ನಮ್ಮ ದಾರಿ ನಮ್ಮ ಶಕ್ತಿ, ಸಾಮರ್ಥ್ಯ ನಮಗೆ. ಅದನ್ನರಿತು ಸಾಗಿರಿ. ಸತತ ಪರಿಶ್ರಮದ ಮೂಲಕ ಗುರಿ ಮುಟ್ಟಿ. ಆಗ ಹೆತ್ತವರ ಆಶೀರ್ವಾದ ನಿಮ್ಮ ಶ್ರಮ ಎರಡರ ಪರಿಣಾಮ ಉತ್ತಮ ಫಲಿತಾಂಶ ಸಿಕ್ಕೇ ಸಿಗುತ್ತದೆ.

     

    ಜೈಲಿನಿಂದ ಹೊರಬರುತ್ತಿದ್ದಂತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಎಚ್​.ಡಿ ರೇವಣ್ಣ! ಹೇಳಿದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts