ಮುಂಬೈ: ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂಬುದೀಗ ಹಳೆಯ ಘೋಷಣೆಯಾಯಿತು. ‘ರಕ್ತದಾನ ಮಾಡಿ 1 ಕಿಲೋ ಚಿಕನ್ ಅಥವಾ ಪನೀರ್ ಪಡ್ಕೊಳ್ಳಿ’ ಅನ್ನೋದು ಹೊಸ ಘೋಷಣೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಯ ಪ್ರಭಾದೇವಿ ವಾರ್ಡ್ನ ಕಾರ್ಪೊರೇಟರ್ ಶಿವಸೇನೆಯ ನಾಯಕ ಸಮಾಧಾನ್ ಸರ್ವಂಕರ್ ಇಂಥದ್ದೊಂದು ಉಡುಗೊರೆ ಘೋಷಿಸಿರುವಂಥದ್ದು!
ಈ ಸಾಂಕ್ರಾಮಿಕ ಸಂಕಷ್ಟ ಕಾಲದಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) ಉತ್ತಮ ಪೌಷ್ಟಿಕಾಂಶ ಮತ್ತು ವಿಟಮಿನ್ಗಳಿರುವ ಮತ್ತು ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುವಂತೆ ಸೂಚಿಸಿದೆ. ಪೌಲ್ಟ್ರಿ ಮತ್ತು ಡೇರಿ ಉತ್ಪನ್ನಗಳಲ್ಲಿ ಇದು ಹೇರಳವಾಗಿದೆ. ಹೀಗಾಗಿ ರಕ್ತದಾನ ಮಾಡಿದವರಿಗೆ ಒಂದು ಕಿಲೋ ಚಿಕನ್ ಅಥವಾ ಪನೀರ್ ನೀಡಲು ನಿರ್ಧರಿಸಿದೆವು.
ಸಮಾಧಾನ್ ಸರ್ವಂಕರ್, ಶಿವಸೇನಾ ನಾಯಕ
ಸಮಾಧಾನ್ ಸರ್ವಂಕರ್ ಹಿರಿಯ ಶಿವಸೇನಾ ನಾಯಕ ಸದಾ ಸರ್ವಂಕರ್ ಅವರ ಪುತ್ರ. ಡಿಸೆಂಬರ್ 13ರಂದು ಮುಂಬೈನ ನ್ಯೂ ಪ್ರಭಾದೇವಿಯಲ್ಲಿರುವ ರಾಜಭಾಹು ಸಾಲ್ವಿ ಗ್ರೌಂಡ್ನಲ್ಲಿ ರಕ್ತದಾನ ಆಯೋಜಿಸಲಾಗಿದ್ದು, ಲೋವರ್ ಪಾರೇಲ್ನಲ್ಲಿರುವ ಕೆಇಎಂ ಹಾಸ್ಪಿಟಲ್ ಸಹಯೋಗವಿದೆ. ಸುಮ್ನೇ ರಕ್ತದಾನ ಮಾಡಿ ಅಂದರೆ ಯಾರೂ ಬರಲ್ಲ ಅನ್ನೋ ಕಾರಣಕ್ಕೆ ಈ ಉಡುಗೊರೆ ಘೋಷಣೆ ಮಾಡಲಾಗಿದೆ ಎನ್ನುತ್ತಾರೆ ಸಮಾಧಾನ್ ಸರ್ವಂಕರ್.
ಇದನ್ನೂ ಓದಿ: ಭಾರತ್ ಬಂದ್; ಸಂಘಟನೆಗಳಿಂದ ವಿನೂತನ ಪ್ರತಿಭಟನೆ; ಹೆದ್ದಾರಿ ತಡೆದವರ ಬಂಧನ
ರಕ್ತದಾನ ಶಿಬಿರ ಅಂದು ಬೆಳಗ್ಗೆ 10ರಿಂದ ಅಪರಾಹ್ನ 2ರ ತನಕ ನಡೆಯಲಿದೆ. ಈ ಉಡುಗೊರೆ ಪಡೆಯಬೇಕಾದರೆ ಡಿಸೆಂಬರ್ 11ರ ಮೊದಲೇ ಸಾಮಾನಾ ಪ್ರೆಸ್ ಸಮೀಪ ಇರುವ ಶಿವಸೇನಾ ಶಾಖಾ 194ರಲ್ಲಿ ಹೆಸರು ನೋಂದಾಯಿಸಬೇಕೆಂಬ ಷರತ್ತು ಇದೆ. 1,000 ಯುನಿಟ್ ರಕ್ತ ಸಂಗ್ರಹಿಸುವ ಉದ್ದೇಶವಿದ್ದು, ಈಗಾಗಲೇ 300ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿದ್ದಾರೆ ಎಂದು ಸರ್ವಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ವರ್ಷ 5ಜಿ ಕ್ರಾಂತಿ ಗ್ಯಾರೆಂಟಿ – ಖಾತರಿ ನೀಡಿದ್ರು ಮುಕೇಶ್ ಅಂಬಾನಿ
ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತೆ ಕರೆ ನೀಡಿದ್ದರು. ಕರೊನಾ ಸಂಕಷ್ಟದಿಂದಾಗಿ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಚಾಲ್ತಿಗೆ ಬಂದ ಕಾರಣ, ರಕ್ತ ದಾನಿಗಳ ಸಂಖ್ಯೆ ಕಡಿಮೆಯಾಗಿ ರಕ್ತದ ಕೊರತೆ ಕಾಣಿಸಿದೆ. ಹೀಗಾಗಿ ಇಂಥದ್ದೊಂದು ಮನವಿಯನ್ನು ಅವರು ಮಾಡಿದ್ದರು. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಜನವರಿ 9ಕ್ಕೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ