ನವದೆಹಲಿ: ಲಾಕ್ಡೌನ್ 4.0 ಮೇ 31ರವರೆಗೆ ಜಾರಿಯಲ್ಲಿದೆ. ಆದರೂ ಕೇಂದ್ರ ಸರ್ಕಾರ ಸೋಮವಾರದಿಂದ (ಮೇ 25) ದೇಶಿಯ ವಿಮಾನ ಸಂಚಾರ ಆರಂಭಿಸಲು ಉತ್ಸುಕತೆ ತೋರುತ್ತಿದೆ. ಇದಕ್ಕಾಗಿ ಅದು ಟಿಕೆಟ್ ದರಗಳನ್ನು ನಿರ್ಧರಿಸಿದೆ. ಅಲ್ಲದೆ, ಅಗತ್ಯವಾದ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆದರೂ, ನಿಗದಿಯಂತೆ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.
ದೇಶಿಯ ವಿಮಾನ ಸಂಚಾರ ಆರಂಭಿಸಲು ಮಹಾರಾಷ್ಟ್ರ, ತಮಿಳುನಾಡು ಸೇರಿ ಕೆಲವೊಂದು ರಾಜ್ಯಗಳು ವಿರೋಧ ವ್ಯಕ್ತಪಡಿಸಿರುವುದು ಇದಕ್ಕೆ ಕಾರಣ.
ಮೇ 31ರವರೆಗೆ ಲಾಕ್ಡಾನ್ 4.0 ಜಾರಿಯಲ್ಲಿರುತ್ತದೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ, ಕರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 31ರವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಅನುಷ್ಠಾನಗೊಳಿಸಲು ತಾನು ಬದ್ಧವಾಗಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶಿಯ ವಿಮಾನ ಸಂಚಾರಕ್ಕೆ ರಾಜ್ಯದಲ್ಲಿ ಅವಕಾಶ ಮಾಡಿಕೊಡದಿರಲು ಅದು ನಿರ್ಧರಿಸಿದೆ.
ಇದನ್ನೂ ಓದಿ: ಸಮುದ್ರದಾಳದಿಂದ ಮನುಷ್ಯರಿಗೆ ಗಿಫ್ಟ್ ತರುತ್ತಿರುವ ಡಾಲ್ಫಿನ್ ಗುಂಪು!
ಅದರಂತೆ ತಮಿಳುನಾಡಿನಲ್ಲೂ ಕೋವಿಡ್-19 ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ಲಾಕ್ಡೌನ್ 4.0ದಿಂದಾಗಿ ರಾಜ್ಯಾದ್ಯಂತ ನಗರ ಸಾರಿಗೆ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಿಯ ವಿಮಾನ ಸಂಚಾರ ಆರಂಭವಾದರೆ, ಜನರಿಗೆ ತಮ್ಮ ಮನೆಗಳಿಗೆ ತಲುಪಿಕೊಳ್ಳಲು ಕಷ್ಟವಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಈ ಕಾರಣದಿಂದಾಗಿ ತಮಿಳುನಾಡಿನಲ್ಲಿ ಕೂಡ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.
ಈ ನಡುವೆ ಕರ್ನಾಟಕ ಮತ್ತು ಕೇರಳ ಸೇರಿ ಆರು ರಾಜ್ಯಗಳು ತಮ್ಮಲ್ಲಿಗೆ ಬರುವ ವಿಮಾನ ಪ್ರಯಾಣಿಕರನ್ನು ಕಡ್ಡಾಯ ಕ್ವಾರಂಟೈನ್ಗೆ ಒಳಪಡಿಸುವುದಾಗಿ ಹೇಳಿವೆ. ಇದು ಕೂಡ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಆದರೆ ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ ನೀಡಿದ್ದು, ಆರೋಗ್ಯ ಸೇತು ಆ್ಯಪ್ ಹೊಂದಿದ್ದು, ಅದು ಹಸಿರು ತೋರಿಸುತ್ತಿದ್ದರೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಿಸಲು ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ಅದು ಕೆಂಪು ತೋರಿಸಿದರೆ, ಅಂಥವರನ್ನು ತಕ್ಷಣವೇ ಕ್ವಾರಂಟೈನ್ಗೆ ಕಳುಹಿಸಲಾಗುವುದು. ಹಾಗಾಗಿ, ವಿಮಾನ ಪ್ರಯಾಣಿಕರನ್ನು ಕ್ವಾರಂಟೈನ್ಗೆ ಒಳಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರದಲ್ಲೇ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೂ ಈಗ ಈ ವಿಷಯವಾಗಿ ವಿರೋಧ ವ್ಯಕ್ತಪಡಿಸುತ್ತಿರುವುದು ಸಲ್ಲ. ಅದೇನೇ ಆದರೂ ವಿಮಾನ ಸಂಚಾರ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಹೀಗಿದ್ದರೂ, ವಿವಿಧ ರಾಜ್ಯಗಳ ವಿರೋಧದ ಧ್ವನಿ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಿಯ ವಿಮಾನ ಸಂಚಾರ ಆರಂಭವಾಗುವುದು ಅನುಮಾನವಾಗಿದೆ.
ಕೇರಳದಲ್ಲಿ ಮತ್ತೊಂದು ಸೆಕ್ಸ್ ಹಗರಣ: ಮಹಿಳೆ ಜತೆ ಸಿಕ್ಕಿಬಿದ್ದ ಫಾದರ್!