ತೀರ್ಥಹಳ್ಳಿ: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಒಡತಿಗಾಗಿ ನಾಲ್ಕು ದಿನಗಳ ಕಾಲ ನರ್ಸಿಂಗ್ ಹೋಂ ಎದುರು ಶ್ವಾನವೊಂಡು ಕಾದು ಕುಳಿತಿತ್ತು. ಈ ದೃಶ್ಯ ಕಂಡು ಆಸ್ಪತ್ರೆ ಸಿಬ್ಬಂದಿ ಮತ್ತು ಜನರು ಮಮ್ಮಲ ಮರುಗಿದ್ದರು. ದೇವರೇ ಈ ನಾಯಿಯ ಒಡತಿ ಬೇಗ ಚೇತರಿಸಿಕೊಳ್ಳಲಿ ಎಂದು ಅವರೂ ಮನದಲ್ಲೇ ಪ್ರಾರ್ಥಿಸಿದ್ದರು. ಆದರೆ ಒಡತಿ ಬದುಕಿ ಬಾರಲೇ ಇಲ್ಲ. ಅತ್ತ ನಾಯಿಯ ಮೂಕವೇದನೆ ನೋಡಲಾಗುತ್ತಿಲ್ಲ… ಇಂತಹ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಅವರು ಅನಾರೋಗ್ಯದಿಂದ ಪಟ್ಟಣದ ನರ್ಸಿಂಗ್ ಹೋಮ್ಗೆ ದಾಖಲಾಗಿದ್ದರು. ಅವರ ಪಪ್ಪಿ ಹೆಸರಿನ 8 ತಿಂಗಳ ಪ್ರಾಯದ ನಾಯಿ, ನಾಗರತ್ನಾ ಶಾಸ್ತ್ರಿ ಅವರನ್ನು ನರ್ಸಿಂಗ್ ಹೋಮ್ಗೆ ಸೇರಿಸಿದಾಗಿನಿಂದ ಬಾಗಿಲಲ್ಲೇ ವಾರ್ಡಿನ ಕಡೆ ಮುಖ ಮಾಡಿ ಕಾದು ನಿಂತಿರುತಿತ್ತು. ಆಸ್ಪತ್ರೆ ಸಿಬ್ಬಂದಿ ಓಡಿಸಿದರೂ ಪುನಃ ಬಂದು ಬಾಗಿಲಲ್ಲೇ ನಿಂತಿರುತ್ತಿತ್ತು . ಚಿಕಿತ್ಸೆಗೆ ಸ್ಪಂದಿಸದೆ ನಾಗರತ್ನಾ ಶಾಸ್ತ್ರಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದು, ಬಳಿಕ ಪಪ್ಪಿ ಆಹಾರ ಕೂಡ ಸೇವಿಸಿಲ್ಲ ಎಂದು ತಿಳಿದು ಬಂದಿದೆ.
ನರ್ಸಿಂಗ್ ಹೋಮ್ ಬಾಗಿಲಲ್ಲಿ ನಾಯಿ ಕಾದು ಕುಳಿತಿರುವ ಫೋಟೋ ವೈರಲ್ ಆಗಿದ್ದು, ಈಚೆಗೆ ಬಿಡುಗಡೆಯಾಗಿರುವ ಚಾರ್ಲಿ 777 ಸಿನಿಮಾವನ್ನು ನೆನಪಿಸುವಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಭಾವುಕರಾಗಿದ್ದಾರೆ. ಅಮ್ಮ ಇನ್ನಿಲ್ಲ ಎಂಬ ನೋವಿನ ಜತೆಗೆ ಪಪ್ಪಿಯ ಮೂಕವೇದನೆ ನಮಗೆ ಮತ್ತಷ್ಟು ನೋವಾಗುತ್ತಿದೆ ಎಂದು ನಾಗರತ್ನ ಶಾಸ್ತ್ರಿ ಅವರ ಪುತ್ರಿ ಸುಧಾ ಜೋಯ್ಸ ಪ್ರತಿಕ್ರಿಯಿಸಿದ್ದಾರೆ.
ಸ್ಯಾಂಟ್ರೋ ರವಿ ‘ಪಿಂಪ್’ ಮಾತ್ರವಲ್ಲ… ಬಗೆದಷ್ಟೂ ಬಯಲಾಗ್ತಿದೆ ಈತನ ಕರಾಳ ಮುಖ…