ಕಾಸರಗೋಡು/ ಬದಿಯಡ್ಕ: ಸಾಕುನಾಯಿಯನ್ನು ಚಲಿಸುವ ಕಾರಿನ ಹಿಂಬದಿಗೆ ಕಟ್ಟಿ ಎಳೆದೊಯ್ದು ಪ್ರಾಣಿ ಹಿಂಸೆ ನೀಡಿದಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿ ನೆಡುಂಬಾಶ್ಯೇರಿ ಪುತ್ತನ್ವೇಲಿಕ್ಕರ ನಿವಾಸಿ ಯೂಸುಫ್ ಬಂಧಿತ. ಈತ ಶುಕ್ರವಾರ ಸಾಕುನಾಯಿಯನ್ನು ಕಾರಿನ ಹಿಂಭಾಗಕ್ಕೆ ಬಿಗಿದು ರಸ್ತೆಯಲ್ಲಿ ಅತ್ಯಂತ ಕ್ರೂರವಾಗಿ ಎಳೆದೊಯ್ಯುತ್ತಿದ್ದ ದೃಶ್ಯವನ್ನು ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ನಾಯಿಯನ್ನು ಅಮಾನುಷವಾಗಿ ಎಳೆದೊಯ್ಯುತ್ತಿರುವುದನ್ನು ಪ್ರಶ್ನಿಸಿದಾಗ ಕಾರು ಚಾಲಕ ಹೀಯಾಳಿಸಿದ್ದ. ನಂತರ ಹಗ್ಗ ತುಂಡರಿಸಿ, ನಾಯಿಯನ್ನು ರಸ್ತೆ ಮಧ್ಯೆ ಬಿಟ್ಟು ಮುಂದೆ ಸಾಗಿದ್ದ.
ಮೊಬೈಲ್ನಲ್ಲಿ ನಾಯಿಯನ್ನು ಎಳೆದೊಯ್ಯುತ್ತಿದ್ದ ದೃಶ್ಯವನ್ನು ಸೆರೆ ಹಿಡಿದ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಗಾಯಗೊಂಡ ನಾಯಿಗೆ ಊರವರ ಸಹಾಯದಿಂದ ಚಿಕಿತ್ಸೆ ನೀಡಿದ್ದರು. ಕಾರು ಚಾಲಕನ ಕ್ರೂರತೆ ಬಗ್ಗೆ ವ್ಯಾಪಕ ಖಂಡನೆ ಕೇಳಿಬಂದಿದೆ. ಕಾರಿನ ಚಾಲಕನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು, ಮೋಟಾರು ವಾಹನ ಇಲಾಖೆಯೂ ಕ್ರಮಕ್ಕೆ ಮುಂದಾಗಿದೆ. ಘಟನೆ ಬಗ್ಗೆ ಕೇಂದ್ರದ ಮಾಜಿ ಸಚಿವೆ ಮನೇಕಾ ಗಾಂಧಿ ವಿಷಾದ ವ್ಯಕ್ತಪಡಿಸಿದ್ದು, ಆರೋಪಿ ವಿರುದ್ಧ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.