ಬೆಂಗಳೂರು: ಸಾರ್ವಜನಿಕರು ಕರೊನಾ ನಿರೋಧಕ ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಿಂಚಣಿಯನ್ನು ನೀಡಲಾಗುವುದಿಲ್ಲ ಹಾಗೂ ಪಡಿತರ ಸೌಲಭ್ಯ ಒದಗಿಸಲಾಗುವುದಿಲ್ಲ ಎಂಬ ಸುದ್ದಿಯೊಂದು ಹರಿದಾಡಿದ್ದು, ಅದಕ್ಕೀಗ ಸರ್ಕಾರವೇ ಸ್ಪಷ್ಟೀಕರಣವೊಂದನ್ನು ಹೊರಡಿಸಿದೆ.
ಪಿಂಚಣಿ ಹಾಗೂ ಪಡಿತರ ಸೇರಿ ಸರ್ಕಾರದ ಯಾವುದೇ ಯೋಜನೆಗಳನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಜೋಡಿಸಿಲ್ಲ. ಹೀಗಾಗಿ ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿ ಆಗಲು ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವೇನಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಅಪ್ಪನನ್ನು ಕೊಲೆ ಮಾಡಿಸಿದ್ದವನ ಹತ್ಯೆ ಮಾಡಿ ಸೇಡು ತೀರಿಸಿಕೊಂಡ ಮಗ; ಎರಡು ವರ್ಷಗಳ ಬಳಿಕ ನಡೆಯಿತು ಪ್ರತೀಕಾರ..
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಯಾವುದೇ ನಿರ್ಬಂಧ ಹೇರದೆ ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಕೋವಿಡ್ ಲಸಿಕೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕು ಎಂದು ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜತೆಗೆ ಅವರು ಇನ್ನೊಂದು ಸೂಚನೆಯನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದ್ದಾರೆ. ಒಂದುವೇಳೆ ಸರ್ಕಾರದ ಯಾವುದಾದರೂ ಕಾರ್ಯಕ್ರಮ ಅಥವಾ ಯೋಜನೆಯನ್ನು ಕೋವಿಡ್ ಲಸಿಕೀಕರಣದ ಜತೆ ತಪ್ಪಾಗಿ ಜೋಡಿಸಿದ್ದರೆ ಅದನ್ನು ಕೂಡಲೇ ಕೈಬಿಡುವಂತೆಯೂ ಸೂಚಿಸಿದ್ದಾರೆ.