More

    ನಾಳೆ ಆಗುತ್ತಾ ಕರ್ನಾಟಕ ಬಂದ್?; ರಾಜ್ಯದಲ್ಲಿ ಕಟ್ಟೆಚ್ಚರ..

    ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಶನಿವಾರ (ಡಿ.5) ಬಂದ್​ಗೆ ಕರೆ ನೀಡಿದೆ. ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ಸೂಚಿಸಿವೆ. ಹೀಗಾಗಿ ಬಂದ್ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಗಿ ಜನ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಕಳೆದೊಂದು ವಾರದಿಂದ ಅತ್ತಿಬೆಲೆ ಗಡಿ ಬಂದ್, ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್.ಪುರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮರಾಠಾ ಅಭಿವೃದ್ಧಿ ನಿಗಮ ಕೈಬಿಡಬೇಕೆಂಬ ಬೇಡಿಕೆಯನ್ನು ಸರ್ಕಾರ ಪರಿಗಣಿಸದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್​ಗೆ ಮುಂದಾಗಿವೆ.

    ಶನಿವಾರ ಬೆಳಗ್ಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಾಲೂಕುಗಳಲ್ಲಿ ತಹಸೀಲ್ದಾರ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಹೋರಾಟಗಾರರು ತೀರ್ವನಿಸಿದ್ದಾರೆ. ರಾಜಧಾನಿಯಲ್ಲಿ ಮೇಖ್ರಿ ವೃತ್ತದಿಂದ ಆನಂದರಾವ್ ವೃತ್ತ ದವರೆಗೆ ರ‍್ಯಾಲಿ ನಡೆಸಲಿದ್ದಾರೆ. ವೈದ್ಯಕೀಯ ಸೇವೆ, ಔಷಧ ಅಂಗಡಿ, ಹಾಲು, ದಿನಪತ್ರಿಕೆ ಇನ್ನಿತರ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವುದಿಲ್ಲ. ಚಾಲಕರ ಸಂಘ ಬಂದ್​ಗೆ ಬೆಂಬಲ ಸೂಚಿಸಿರುವುದರಿಂದ ಆಟೋ, ಓಲಾ-ಊಬರ್ ಕ್ಯಾಬ್ ಸಂಚಾರ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ.

    ಶಾಂತಿಯುತ ಪ್ರತಿಭಟನೆ

    ಎಂಇಎಸ್ ಶಾಸಕರು ಕನ್ನಡ ವಿರೋಧಿ ಹೇಳಿಕೆ, ಕನ್ನಡಿಗರಿಗೆ ಮಸಿ ಬಳಿಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಂಥವರ ಅಭಿವೃದ್ಧಿಗೆ ನಿಗಮ ಸ್ಥಾಪಿಸಲು ಹೊರಟಿರುವುದು ಸರಿಯಲ್ಲ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕರ್ನಾಟಕ ಬಂದ್ ನಡೆಯಲು ಸರ್ಕಾರವೇ ಕಾರಣವಾಗಿದೆ ಎಂದು ಆರೋಪಿಸಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ, ರಾಜ್ಯದ ಯಾವುದೇ ಭಾಗದಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಂದ್​ಗೆ ನೈತಿಕ ಬೆಂಬಲ ಸೂಚಿಸಲಾಗಿದ್ದು, ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಕೆಲಸ ಮಾಡುವುದಿಲ್ಲ. ಉಪವಾಸ ಸತ್ಯಾಗ್ರಹ, ಗಡಿಬಂದ್, ಶಾಂತಿಯುತವಾಗಿ ರ‍್ಯಾಲಿ ಮಾಡಲು ನಿರ್ಧರಿಸಲಾಗಿದೆ. ಬಳಿಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಕೂಡ ಸ್ಪಷ್ಟಪಡಿಸಿದೆ.

    ಮುನ್ನೆಚ್ಚರಿಕೆ ವಹಿಸಲು ಕೆಎಸ್ಸಾರ್ಟಿಸಿ ಎಂಡಿ ಸೂಚನೆ

    ಬಂದ್ ವೇಳೆ ಬಸ್ ಕಾರ್ಯಾಚರಣೆಗೆ ಅಡ್ಡಿಪಡಿಸುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಿಗಮದ ವಿಭಾಗದ ಕಚೇರಿ, ಘಟಕ, ಕಾರ್ಯಾಗಾರ, ಬಸ್ ನಿಲ್ದಾಣಗಳಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಜತೆ ಸಂಪರ್ಕದಲ್ಲಿರಬೇಕು ಹಾಗೂ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಪಡೆಯಬೇಕು ಎಂದು ತಿಳಿಸಿದ್ದಾರೆ.

    ಏನೇನಿರುತ್ತದೆ?

    ಆಸ್ಪತ್ರೆ, ಔಷಧ ಅಂಗಡಿ, ಆಂಬುಲೆನ್ಸ್ ಸೇವೆ, ಹಾಲು, ತರಕಾರಿ, ದಿನಪತ್ರಿಕೆ, ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ.

    ಇವು ಅನುಮಾನ

    ಹೋಟೆಲ್, ಅಂಗಡಿಮುಂಗಟ್ಟು ತೆರೆಯುವ ಸಾಧ್ಯತೆ ಕಡಿಮೆ. ಆಟೋ, ಕ್ಯಾಬ್​ಗಳು ರಸ್ತೆಗೆ ಇಳಿಯುವುದು ಅನುಮಾನ.

    ನಾಳೆ ಆಗುತ್ತಾ ಕರ್ನಾಟಕ ಬಂದ್?; ರಾಜ್ಯದಲ್ಲಿ ಕಟ್ಟೆಚ್ಚರ..ಡಿ.5ರಂದು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸರ್ಕಾರಿ ಬಸ್​ಗಳು ಓಡಾಡಲಿವೆ. ಬಂದ್ ಮಾಡಿದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ. ಬಂದ್ ಮಾಡಬೇಡಿ ಎಂದು ಮನವಿ ಮಾಡುತ್ತೇವೆ.

    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts