ಧಾರವಾಡ: ಪ್ರಧಾನಮಂತ್ರಿ ನರೇಂದ್ರ ಮೋದಿ ಸದ್ಯದಲ್ಲೇ ಕರ್ನಾಟಕಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರೊಂದಿಗೆ ಬಾಲಿವುಡ್ ನಟ ಅಕ್ಷಯ್ಕುಮಾರ್ ಕೂಡ ಉಪಸ್ಥಿತರಿರಲಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ. ವಿಶೇಷವೆಂದರೆ ಈ ಕುರಿತು ಖುದ್ದು ಅಕ್ಷಯ್ಕುಮಾರ್ ಕರೆ ಮಾಡಿ ಮಾತನಾಡಿದ್ದಾರೆ.
ಧಾರವಾಡದಲ್ಲಿ ಜ.12ರಿಂದ 16ವರೆಗೆ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ಸಪ್ತಾಹದ ಭಾಗವಾಗಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಇದು ಐದು ದಿನಗಳ ಕಾಲ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಜೋಶಿ ತಿಳಿಸಿದರು.
ದೇಶಾದ್ಯಂತದಿಂದ 7,500 ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲೂ 3,500 ಜನರು ನೇರವಾಗಿ ಭಾಗಿಯಾಗಲಿದ್ದಾರೆ. ಕರ್ನಾಟಕ ಕಾಲೇಜು ಆವರಣದಲ್ಲಿ ಹಲವಾರು ವೇದಿಕೆಗಳಲ್ಲಿ ಬಹುತೇಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಕಲಾವಿದರಿಗೂ ಅವಕಾಶ ಇರಲಿದೆ ಎಂದು ಅವರು ಹೇಳಿದರು.
ಈ ಉತ್ಸವದಲ್ಲಿ ದೇಶದ ಸಾಂಸ್ಕ್ರತಿಕ, ಭೂಗೋಳಿಕ ಐಕ್ಯತೆ ಇರಲಿದೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಉತ್ಸವ ಇದಾಗಲಿದೆ. ಜ. 12ರಂದು ಮಧ್ಯಾಹ್ನ 1.30ಕ್ಕೆ ಪ್ರಧಾನಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಬಳಿಕ ಮಧ್ಯಾಹ್ನ 2 ಗಂಟೆಗೆ ಉದ್ಘಾಟನೆ ಇರಲಿದೆ ಎಂದ ಜೋಶಿ, ಪ್ರಧಾನಿಯವರ ಕಾರ್ಯಕ್ರಮದ ಭದ್ರತೆಯೂ ಮುಖ್ಯವಾದ್ದರಿಂದ ಉದ್ಘಾಟನೆ ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದರು.
ವಿಶೇಷವೆಂದರೆ ಈ ಯುವಜನೋತ್ಸವ ಕುರಿತ ಸುದ್ದಿಗೋಷ್ಠಿ ನಡೆಯುತ್ತಿರುವಾಗಲೇ ನಟ ಅಕ್ಷಯ್ಕುಮಾರ್ ಅವರಿಂದ ಜೋಶಿಗೆ ಕರೆ ಬಂದಿದೆ. ಈ ಉತ್ಸವಕ್ಕೆ ಅಕ್ಷಯ್ಕುಮಾರ್ ಅವರನ್ನು ಆಹ್ವಾನಿಸಲು ಜೋಶಿ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಈ ಕರೆ ಬಂದಿತ್ತು. ಉತ್ಸವವನ್ನು ಜ. 12ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ತಾವು ಜ. 16ರಂದು ನಡೆಯುವ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ ಕೋರಿದ್ದಕ್ಕೆ ಅಕ್ಷಯ್ಕುಮಾರ್, ನಾನೂ ಜ. 12ರಂದೇ ಬರುತ್ತೇನೆ ಎಂದರು. ಆಗ ಪ್ರಧಾನಿ ಕಾರ್ಯಕ್ರಮದ ಭದ್ರತೆ ವಿಷಯ ಇರುತ್ತದೆ ಎಂದು ಜೋಶಿ ಹೇಳಿದರು. ಹೀಗಾಗಿ ಜ.12ರಂದು ಮೋದಿ ಜತೆ ಅಕ್ಷಯ್ಕುಮಾರ್ ಉಪಸ್ಥಿತಿ ಕೂಡ ಇರಲಿದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಶಾಲಾ ಬಸ್ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ, ಅವಧಿ ಮುಗಿದ ಔಷಧ, ಪೇನ್ ಕಿಲ್ಲರ್ಸ್ ಪತ್ತೆ!