ಪ್ರಧಾನಿ ನರೇಂದ್ರ ಮೋದಿಯವರು ಮಾ.22ರಂದು ಕರೆ ನೀಡಿದ್ದ ಜನತಾ ಕರ್ಫ್ಯೂವನ್ನು ದೇಶದ ಜನರು ಅತ್ಯಂತ ಯಶಸ್ವಿಯಾಗಿಸಿದ್ದಾರೆ. ಮೋದಿಯವರ ಮನವಿಯಂತೆ ಸಂಜೆ 5ಗಂಟೆ ಹೊತ್ತಿಗೆ ಬಹುತೇಕರು ತಮ್ಮ ಮನೆ ಬಾಲ್ಕನಿ, ಟೆರೇಸ್ಗಳಿಗೆ ಬಂದು ಚಪ್ಪಾಳೆ ಹೊಡೆದು, ಜಾಗಟೆ ಬಾರಿಸಿ, ಶಂಖ ಊದುವ ಮೂಲಕ ಕರೊನಾ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನರೇಂದ್ರ ಮೋದಿಯವರು ಮಾ.19ರಂದು ದೇಶವನ್ನು ಉದ್ದೇಶಿಸಿ ಮಾತನಾಡಿ, ಕರೊನಾ ವಿರುದ್ಧದ ಹೋರಾಟಕ್ಕೆ ಸಜ್ಜಾಗಿ, ಮಾ.22ರಂದು ಎಲ್ಲರೂ ಒಟ್ಟಾಗಿ ಜನತಾ ಕರ್ಫ್ಯೂ ಆಚರಿಸಿ ಎಂದಿದ್ದರು. ಅಲ್ಲದೆ, ಈ ಜನತಾ ಕರ್ಫ್ಯೂ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸಿ, ಅವರಲ್ಲೂ ಅರಿವು ಮೂಡಿಸಿ ಎಂದಿದ್ದರು. ಜನತಾ ಕರ್ಫ್ಯೂವನ್ನು ಎಲ್ಲರೂ ಒಟ್ಟಾಗಿ ಆಚರಿಸೋಣ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ್ದರು.
ಮಾ.21ರಂದು ನಟ ಕಿಚ್ಚ ಸುದೀಪ್ ಅವರೂ ಕೂಡ ಮಹಿಳೆಯೋರ್ವರು ಜನತಾ ಕರ್ಫ್ಯೂ ಬಗ್ಗೆ ಮಾತನಾಡಿದ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದರು. ಪ್ರತಿಯೊಬ್ಬರೂ ಜನತಾ ಕರ್ಫ್ಯೂದಲ್ಲಿ ಪಾಲ್ಗೊಳ್ಳೋಣ. ಅಂದು ಸಂಜೆ 5 ಗಂಟೆಗೆ 5 ನಿಮಿಷ ಚಪ್ಪಾಳೆಗಳ ಮೂಲಕ ಕರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸೋಣ.
ಪ್ರಧಾನಿ ಮೋದಿಯವರು ನಿಮ್ಮೆಲ್ಲರ ಮೂಲಕ ಎನರ್ಜಿ ಮೆಡಿಸಿನ್ ಸೃಷ್ಟಿಸುತ್ತಿದ್ದಾರೆ. ಇದನ್ನು ಎಷ್ಟಾಗತ್ತೋ ಅಷ್ಟು ಜನರಿಗೆ ಅರ್ಥ ಮಾಡಿಸಬೇಕು. ಈ ಸಂದರ್ಭವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಆರೋಗ್ಯಯುತ ದೇಶ ಕಟ್ಟಲು ಎಲ್ಲರೂ 5ಗಂಟೆಗೆ ಚಪ್ಪಾಳೆ ಹೊಡೆಯೋಣ ಎಂದು ಮಹಿಳೆ ಹೇಳಿದ್ದರು.
ವಿಡಿಯೋ ಟ್ವೀಟ್ ಮಾಡಿದ್ದ ಕಿಚ್ಚ ಸುದೀಪ್ ಅವರು, ಇವರು ಮಾತಾಡಿದ್ದನ್ನು ಕೇಳಿಸಿಕೊಳ್ಳಿ. ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂದಲ್ಲಿ ಪಾಲ್ಗೊಂಡು ಚಪ್ಪಾಳೆ ಹೊಡೆದರೆ ನಾವೇನನ್ನಾದರೂ ಕಳೆದುಕೊಳ್ಳುತ್ತೀವಾ? ಇಲ್ಲ..ನಮಗೇನಾದರೂ ಲಾಭ ಇದೆಯಾ? ಇರಬಹುದು…ಅದೆಲ್ಲ ಆಮೇಲೆ ಯೋಚನೆ ಮಾಡೋಣ. ಸದ್ಯ ಎಲ್ಲರೂ ನಮಗಾಗಿಯಾದರೂ ಇದರಲ್ಲಿ ಪಾಲ್ಗೊಳ್ಳೋಣ ಎಂದಿದ್ದರು. ಹಾಗೇ #ClapAt5pm (ಸಂಜೆ 5ಗಂಟೆಗೆ ಚಪ್ಪಾಳೆ ತಟ್ಟಿ) ಎಂದಿದ್ದರು.
ಆದರೆ ಹೀಗೆ ಟ್ವೀಟ್ ಮಾಡಿದ್ದ ಸುದೀಪ್ಗೆ ನಟ ಚೇತನ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಬಗ್ಗೆ ನನಗೆ ಗೌರವ ಇದೆ. ವೈದ್ಯಕೀಯ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆಗೆ ಗೌರವ ಸಲ್ಲಿಸಬೇಕು ಎಂಬುದನ್ನು ವೈದ್ಯರ ಮಗನಾಗಿರುವ ನಾನು ಒಪ್ಪಿಕೊಳ್ಳುತ್ತೇನೆ. ಆದರೆ..
ಚಪ್ಪಾಳೆ ಹೊಡೆಯುವುದರಿಂದ ಎನರ್ಜಿ ಮೆಡಿಸಿನ್ ಉತ್ಪತ್ತಿಯಾಗುತ್ತದೆಂಬ ಅವೈಜ್ಞಾನಿಕ ಸಿದ್ಧಾಂತಗಳನ್ನು ಹರಡಬಾರದು. ಇದರಿಂದ ತಪ್ಪು ಮಾಹಿತಿ ರವಾನೆಯಾಗುತ್ತದೆ ಮತ್ತು ಮೂಢನಂಬಿಕೆ ಹೆಚ್ಚಾಗುತ್ತದೆ. ವೈಜ್ಞಾನಿಕವಾಗಿ ಕರೊನಾ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.
Sudeep Sir–
I respect your work in our industry
As son of 2 doctors, i agree our medical personnel must be appreciated
But not by spreading such unscientific 'energy medicine' theories, which lead us down a path of superstition & misinformation
Let's fight #corona w/ science https://t.co/1HuH1qyt8T
— Chetan Kumar (@ChetanAhimsa) March 22, 2020
ಬಡವರಿಗೆ ಉಚಿತ ರೇಷನ್, 1000 ರೂ. ನೀಡುವುದಾಗಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ