More

    ಸಂಭ್ರದಿಂದ ಜರುಗಿದ ದಂಡಿ ದುರ್ಗಮ್ಮ ಜಾತ್ರೆ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಹೊರವಲಯದಲ್ಲಿ ಇರುವ ದಂಡಿನ ದುರ್ಗಮ್ಮ ದೇವಿ ಜಾತ್ರೆ ಪ್ರತಿ ವರ್ಷದಂತೆ ಮಂಗಳವಾರ ಸಡಗರ ಸಂಭ್ರಮದಿಂದ ಜರುಗಿತು. ನೈವೇದ್ಯ ಅರ್ಪಣೆ, ಹರಕೆ, ದೀಡ್​ ನಮಸ್ಕಾರ ಹಾಕುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ಜಾತ್ರೆಯಲ್ಲಿ ಹಲವು ಆಚರಣೆ, ಸಂಪ್ರದಾಯದಂತೆ ದೇವಿಗೆ ಭಕ್ತಿ ಸರ್ಮಪಿಸಲಾಯಿತು.
    ದಂಡಿ ದುರ್ಗಮ್ಮ ಜಾತ್ರೆ ಪ್ರತಿ ವರ್ಷ ಆಡಂಭರದಿಂದ ಜರುಗುತ್ತದೆ. ಜಿಲ್ಲೆ, ಹೊರ ಜಿಲ್ಲೆಯ ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಮಹಾರಾಷ್ಟ್ರ, ಗೋವಾ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಹರಣ ಶಿಖಾರಿ ಜನಾಂಗದ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.
    ಗದಗ ಹೊರವಲಯದ ನಾಗಸಮುದ್ರ ಬಳಿ ಇರುವ ದೇವಸ್ಥಾನವು ಮಂಗಳವಾರ ಭಕ್ತರಿಂದ ತುಂಬಿತ್ತು. ಭಕ್ತರು ಹೂವು, ಹಣ್ಣು, ತೆಂಗಿನಕಾಯಿಗಳನ್ನು ಅಪಿರ್ಸಿ, ದೇವಿಗೆ ಪೂಜೆ ಸಲ್ಲಿಸಿದರು. ರಸ್ತೆ ಉದ್ದಕ್ಕೂ ಅಲ್ಲಲ್ಲಿ ಆಟಿಕೆ, ವಿವಿಧ ತಿಂಡಿಗಳ ಮಳಿಗೆಗಳನ್ನು ತೆರೆಯಲಾಗಿತ್ತು. ದೇವಿ ದರ್ಶನ ಪಡೆದ ಯುವಜನತೆ, ಮಕ್ಕಳು ತಮಗಿಷ್ಟವಾದ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಜಿಲ್ಲಾ ಆರೋಗ್ಯ ಇಲಾಖೆಯು ಭಕ್ತರ ಸೇವೆಗಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದಿತ್ತು.

    ಬಾಕ್ಸ್​:
    ಹರಣ ಶಿಕಾರಿ ಜನಾಂಗದ ಆರಾಧ್ಯ ದೇವೆಯತೆ ಆಗಿರುವ ದಂಡಿ ದುರ್ಗಮ್ಮ ದೇವಿಯ ಜಾತ್ರೆ ತನ್ನದೇ ವಿಶೇಷತೆ ಹೊಂದಿದೆ. ಈ ಜನಾಂಗದ ಜನತೆ ದೇಶದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಪ್ರತಿವರ್ಷ ಜಾತ್ರೆಗೆ ಆಗಮಿಸುತ್ತಾರೆ. ಇದು ಈ ಜನಾಂಗದ ಪರಂಪರೆ.

    ಎರಡು ದಿನ ಮೊದಲೇ ಆಗಮನ:
    ಜಾತ್ರೆ ಆರಂಭವಾಗುವ ಮೊದಲೇ ದೂರದ ಊರಿನಿಂದ ವಿವಿಧ ವಾಹನಗಳಲ್ಲಿ ದೇವಿ ಭಕ್ತರು ಆಗಮಿಸಿದ್ದರು. ನಾಗಸಮುದ್ರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ದೇವಸ್ಥಾನದ ಆಸುಪಾಸು ವಸತಿ ಹೂಡಿದ್ದರು. ಜಾತ್ರೆ ಮುನ್ನಾದಿನ ನಗರದ ಮಾರುಕಟ್ಟೆಯಲ್ಲಿ ಜಾತ್ರೆ ಅಡುಗೆ ಸಿದ್ಧಪಡಿಸಲು ಬೇಕಾದ ದವಸ, ಧಾನ್ಯ, ಪಾತ್ರೆ, ಪಗಡೆಗಳನ್ನು ಖರೀದಿಸಿದ್ದರು. ವಸತಿ ಮಾಡಿದ್ದ ಟೆಂಟ್​ನಲ್ಲಿಯೇ ಮಂಗಳವಾರ ಅಡುಗೆ ಮಾಡಿ ಜಾತ್ರೆಯ ಭರ್ಜರಿ ಊಟ ಸವಿದರು.

    ದೇವಿಗೆ ಅಭಿಷೇಕ:
    ದಂಡಿ ದುರ್ಗಮ್ಮ ದೇವಿಗೆ ಜಲ, ರಾಭಿಷೇಕ ನೆರವೇರಿಸಲಾಯಿತು. ಹೂವಿನ ಅಲಂಕಾರದಿಂದ ಪೂಜೆ ನೆರವೇರಿಸಲಾಯಿತು. ಭಕ್ತರು ಹೂವು, ಹಣ್ಣು, ಕಾಯಿಗಳೊಂದಿಗೆ ದೇವಿಗೆ ನೈವೇದ್ಯ ಅಪಿರ್ಸಿ ದರ್ಶನ ಪಡೆದರು. ಜಾತ್ರೆ ಅತ್ಯಂತ ಶಾಂತಿಯುತವಾಗಿ ನಡೆಯುವಂತೆ ಕಾನೂನು ಸುವ್ಯವಸ್ಥೆ ಪಾಲಿಸಲು ಪೊಲೀಸ್​ ಇಲಾಖೆ ಅಗತ್ಯ ಬಂದೋಬಸ್ತ್​ ಕ್ರಮಗಳನ್ನು ಕೈಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts