ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ, ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ್ ಅವರ ಪುತ್ರ ಅಮಾರ್ತ್ಯ ಹೆಗ್ಡೆಯವರನ್ನು ವರಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಐಶ್ವರ್ಯಾ (22) ಮತ್ತು ಅಮಾರ್ತ್ಯ (27) ನಿಶ್ಚಿತಾರ್ಥ ಇದೇ ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಮುಂದಿನ ವರ್ಷ ವಿವಾಹ ಸಂಭ್ರಮ ಜರುಗಲಿದೆ ಎಂದು ಹೇಳಲಾಗುತ್ತಿದೆ. ಸಿದ್ದಾರ್ಥ್ ಸಾವಿಗೂ ಮುನ್ನವೇ ಮದುವೆ ವಿಚಾರ ಚರ್ಚೆಯಾಗಿತ್ತು. ಆದರೆ, ಅದೇ ಸಮಯದಲ್ಲಿ ಸಿದ್ದಾರ್ಥ್ ಮೃತಪಟ್ಟಿದ್ದರಿಂದ ಮಗ ಅಮಾರ್ತ್ಯ ಮದುವೆ ತಡವಾಗಲಿ ಎಂದು ಬಯಸಿದ್ದರು ಎನ್ನಲಾಗಿದೆ. ಅಲ್ಲದೆ, ಕಳೆದ ವಾರ ಅಮಾರ್ತ್ಯ ಮತ್ತು ಐಶ್ವರ್ಯ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪವನ್ ಒಡೆಯರ್ ವಿರುದ್ಧ ಸುದೀಪ್ ಅಭಿಮಾನಿಗಳ ಆಕ್ರೋಶ
ಇಂಜಿನಿಯರಿಂಗ್ ಪದವಿಧರೆಯಾಗಿರುವ ಐಶ್ವರ್ಯಾ ಸದ್ಯ ತಮ್ಮ ತಂದೆ ನಿರ್ಮಾಣದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನು ಅಮಾರ್ತ್ಯ, ತಾಯಿ ಮಾಳವಿಕರೊಂದಿಗೆ ತಮ್ಮ ಕುಟುಂಬದ ವ್ಯವಹಾರಗಳ ನಿರ್ವಹಣೆ ಮಾಡುತ್ತಿದ್ದಾರೆ.
ವಿ.ಜಿ ಸಿದ್ದಾರ್ಥ್ ಅವರು 2019ರ ಜುಲೈನಲ್ಲಿ ಮಂಗಳೂರಿನ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರ ಅಳಿಯನಾಗಿದ್ದ ಸಿದ್ದಾರ್ಥ್ ಸಾಯುವ ಮುನ್ನ ಪತ್ರವೊಂದರಲ್ಲಿ ಉದ್ಯಮಿಯಾಗಿ ನಾನು ವಿಫಲನಾದೆನು ಮತ್ತು ನನ್ನೆಲ್ಲಾ ತಪ್ಪುಗಳಿಗೆ ನಾನೇ ಹೊಣೆ ಎಂದು ಬರೆದಿದ್ದರು. ಅಲ್ಲದೆ, ಯಾರನ್ನು ತಪ್ಪು ದಾರಿಗೆ ಎಳೆಯುವ ಅಥವಾ ವಂಚಿಸುವ ಉದ್ದೇಶ ನನ್ನದ್ದಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಸರ್ಕಾರದ ವಿಡಿಯೋ ಕಾನ್ಫರೆನ್ಸ್ ವೇಳೆ ಟಾಪ್ಲೆಸ್ ಆದ ಮೆಕ್ಸಿಕೋ ಸಂಸದೆ…!
ಶಿವಕುಮಾರ್ ಹಾಗೂ ಎಸ್.ಎಂ. ಕೃಷ್ಣರ ನಡುವೆ ಸುದೀರ್ಘ ರಾಜಕೀಯ ಸಂಬಂಧವಿದ್ದು, ಎರಡು ಕುಟುಂಬಗಳು ಪರಸ್ಪರ ಪರಿಚಿತರಾಗಿರುವುದರಿಂದ ಕೃಷ್ಣರೇ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಡಿಕೆಶಿ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಐಶ್ವರ್ಯಾ ಕೆಲವು ತಿಂಗಳ ಹಿಂದೆಯೂ ಸಹ ಬಹಳ ಸುದ್ದಿಯಾಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆಶಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧನವಾಗಿ ವಿಚಾರಣೆಗೆ ಒಳಗಾದಾಗ ಐಶ್ವರ್ಯ ಸಹ ವಿಚಾರಣೆಯನ್ನು ಎದುರಿಸಿದ್ದರು.
ಸಿದ್ದಾರ್ಥ್ ಮೃತಪಟ್ಟು ಒಂದು ವರ್ಷ ಅವಧಿ ಕಳೆದ ನಂತರ ಎರಡು ಕುಟುಂಬಗಳು ಮದುವೆ ವಿಚಾರವನ್ನು ತಿಳಿಸಲಿದ್ದಾರೆ ಎನ್ನಲಾಗಿದೆ. 2019ರ ಜುಲೈ 31ರಂದು ಸಿದ್ದಾರ್ಥ್ ಮೃತರಾದರು. ಸಂಪ್ರದಾಯದ ಪ್ರಕಾರ ಸಾವಿನ ಮನೆಯಲ್ಲಿ ಒಂದು ವರ್ಷ ಯಾವುದೇ ಸಂಭ್ರಮಾಚರಣೆ ನಡೆಯುವುದಿಲ್ಲ. ಹೀಗಾಗಿ ಜುಲೈ 31ರ ನಂತರ ಐಶ್ವರ್ಯಾ ಮತ್ತು ಅಮಾರ್ತ್ಯ ನಿಶ್ಚಿತಾರ್ಥ ನಿಶ್ಚಯವಾಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. (ಏಜೆನ್ಸೀಸ್)
ಇದನ್ನೂ ಓದಿ: ಮಾನವೀಯತೆ ಮರೆತು ಗರ್ಭಿಣಿ ಆನೆ ಕೊಂದ ದುಷ್ಟರಿಗೆ ಮುಂದೆ ಕಾದಿದೆ ಮಾರಿಹಬ್ಬ
PHOTO GALLERY| ಹುಟ್ಟುಹಬ್ಬ ಸಂಭ್ರಮದಲ್ಲಿರೋ ಪ್ರಿಯಾಮಣಿಯವರ ಹಾಟ್ ಫೋಟೋ ಗ್ಯಾಲರಿ ನಿಮಗಾಗಿ