More

    ಜಿಲ್ಲಾ ಯುವ ಕಾಂಗ್ರೆಸ್‌ಗೆ ಶಶಿಹುಲಿಕುಂಟೆ ನೂತನ ಸಾರಥಿ ; ಉಪಾಧ್ಯಕ್ಷ ಸ್ಥಾನಕ್ಕೆ ಸುಮುಖ್ ಆಯ್ಕೆ

    ತುಮಕೂರು : ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, 4274 ಮತ ಪಡೆದಿರುವ ಶಶಿಧರ್ ಹುಲಿಕುಂಟೆಮಠ್ ಅಧ್ಯಕ್ಷರಾಗಿ ಹಾಗೂ ಪ್ರತಿಸ್ಪರ್ಧಿ ಸುಮುಖ್ ಕೊಂಡವಾಡಿ 3207ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಎಸ್‌ಸಿ, ಎಸ್‌ಟಿ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ 74 ಮತ ಪಡೆದ ಟಿ.ಪಿ.ಮೋಹನ್‌ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 24 ಮತ ಪಡೆದ ಎನ್.ಯಶವಂತ್ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಕಳೆಗುಂದಿರುವ ಯುವ ಕಾಂಗ್ರೆಸ್‌ಗೆ ಹೊಸ ಚೈತನ್ಯ ನೀಡಬೇಕಿದೆ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಪರಸ್ಪರ ಬಡಿದಾಡಿಕೊಂಡಿರುವ ಗೆಳೆಯರೇ ಪಕ್ಷ ಸಂಘಟನೆಯಲ್ಲಿ ಜತೆಯಾಗಬೇಕಿದೆ.

    ಮಧುಗಿರಿ ತಾಲೂಕಿನಲ್ಲಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಅಸಮಧಾನಗೊಂಡಿರುವ ಕಾಂಗ್ರೆಸ್ ಮುಖಂಡ ಕೊಂಡವಾಡಿ ಚಂದ್ರಶೇಖರ್ ಪುತ್ರ ಸುಮುಖ್ ಅವರನ್ನು ಸೋಲಿಸುವ ಉದ್ದೇಶದಿಂದ ಕೆಎನ್ನಾರ್ ಪುತ್ರ ಆರ್.ರಾಜೇಂದ್ರ ಶಶಿಹುಲಿಕುಂಟೆ ಪರವಾಗಿ ಸಂಪನ್ಮೂಲದ ಜತೆ ಜಿಲ್ಲೆಯೆಲ್ಲೆಡೆ ಪ್ರಚಾರ ನಡೆಸಿದ್ದರು.

    ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯದ ನಾಯಕತ್ವದ ಕೊರತೆಯ ಮಾತು ಕೇಳಿಬರುತ್ತಿರುವ ಕಾಲದಲ್ಲಿ ಅದೇ ಸಮುದಾಯದ ಶಶಹುಲಿಕುಂಟೆ ಯುವ ಕಾಂಗ್ರೆಸ್ ಚಿಕ್ಕಾಣಿ ಹಿಡಿದಿರುವುದು ಹೊಸ ಬೆಳವಣಿಗೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ತಿಪಟೂರು ಹೊರತುಪಡಿಸಿ ಜಿಲ್ಲೆಯ ಎಲ್ಲಿಯೂ ಲಿಂಗಾಯತ ಸಮುದಾಯ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು ಕಡಿಮೆ. ಹಾಗಾಗಿ, ಪಕ್ಷಕ್ಕೆ ಆ ದೊಡ್ಡ ಸಮುದಾಯವನ್ನು ಆಕರ್ಷಿಸುವ ಹೊಣೆ ಶಶಿ ಹೆಗಲಿಗೇರಿದೆ.

    ಕಾಂಗ್ರೆಸ್ ಸಂಘಟಿಸುವ ಬಹುದೊಡ್ಡ ಜವಾಬ್ದಾರಿ ಸಿಕ್ಕಿದ್ದು ಖುಷಿಯಾಗಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಪಕ್ಷ ಸಂಘಟನೆ ಮಾಡಲಾಗುವುದು.
    ಶಶಿಧರ್ ಹುಲಿಕುಂಟೆಮಠ್, ಯುವ ಕಾಂಗ್ರೆಸ್ ಅಧ್ಯಕ್ಷ

    ಕುತೂಹಲ ಮೂಡಿಸಿದೆ ಆರ್.ರಾಜೇಂದ್ರ ಲೆಕ್ಕಾಚಾರ : ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ವರ್ಷಾಂತ್ಯದೊಳಗೆ ಚುನಾವಣೆ ನಡೆಯಲಿದ್ದು, ಜಿಲ್ಲೆಯಿಂದ ಮತ್ತೊಮ್ಮೆ ಅಭ್ಯರ್ಥಿಯಾಗಲು ಆರ್.ರಾಜೇಂದ್ರ ಸಿದ್ಧತೆ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಸುಮುಖ್‌ಗೆ ವಿರುದ್ಧವಾಗಿ ಜಿಲ್ಲೆಯೆಲ್ಲೆಡೆ ಪ್ರಚಾರ ನಡೆಸಿದ್ದು ಚುನಾವಣೆಯಲ್ಲಿ ಪ್ರಭಾವ ಬೀರಲಿದೆ ಎಂದು ಅವರ ರಾಜಕೀಯ ವಿರೋಧಿಗಳು ಮಾತನಾಡಲಾರಂಭಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿ ಜನಪರವಾಗಿದ್ದರೂ ಮಧುಗಿರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಸೋಲಿಗೂ ಇದೇ ಆರೋಪಗಳು ಕಾರಣವಾಗಿದ್ದವು. ಇಷ್ಟಿದ್ದರೂ ರಾಜೇಂದ್ರ ಯುವ ಕಾಂಗ್ರೆಸ್ ಹಿಡಿತದಲ್ಲಿಟ್ಟುಕೊಳ್ಳಲು ನಡೆಸಿರುವ ರಾಜಕೀಯ ಲೆಕ್ಕಾಚಾರದ ಬಗ್ಗೆಯೂ ಸಾಕಷ್ಟು ಕುತೂಹಲವಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆರ್.ರಾಜೇಂದ್ರ ಬೆಂಬಲಿತ ಯುವಕರೇ ಆಯ್ಕೆಯಾಗಿದ್ದು ಯುವ ಕಾಂಗ್ರೆಸ್‌ನಲ್ಲಿರುವ ಹಿಡಿತ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts