ಕೊಪ್ಪಳ: ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ, ಉದ್ಯಮಿ, ವಿದ್ಯುತ್ ಗುತ್ತುಗೆದಾರ ವೀರನಗೌಡ ಪಾಟೀಲ್ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಪ್ಪಳ ಹೊರ ವಲಯದ ಕಿಡದಾಳ ಗ್ರಾಮದಲ್ಲಿ ಬೃಹತ್ ಖಾಸಗಿ ಶಾಲೆ ಇವರ ಒಡೆತನದಲ್ಲಿದೆ. ಇತ್ತೀಚೆಗೆ (ಜ. 27) ಗವಿಸಿದ್ಧೇಶ್ವರ ಜಾತ್ರೋತ್ಸವ ನಡೆದಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಶಾಲೆಗೆ ಭೇಟಿ ನೀಡಿದ್ದರು. ಇದಾದ ವಾರದಲ್ಲೇ ವಿ.ಆರ್.ಪಾಟೀಲ್ ಮೇಲೆ ಐಟಿ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿನ ನಿವಾಸದ ಮೇಲೆ ಬುಧವಾರ ಬೆಳಗ್ಗೆಯೇ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹುಬ್ಬಳ್ಳಿ ಹಾಗೂ ಗೋವಾ ಮೂಲದ ಅಧಿಕಾರಿಗಳಿಂದ ದಾಳಿ ನಡೆದಿದೆ. ಮಂಗಳವಾರವೇ ಹೊಸಪೇಟೆಯಲ್ಲಿ ಠಿಕಾಣಿ ಹೂಡಿದ್ದ ಅಧಿಕಾರಿಗಳು ಬೆಳಗ್ಗೆ 9 ಗಂಟೆ ವೇಳೆಗೆ ಪಾಟೀಲ್ ಮನೆಗೆ ತೆರಳಿದ್ದಾರೆ. ಈ ವೇಳೆ ಪಾಟೀಲ್ ಮನೆಯಲ್ಲಿದ್ದರೆನ್ನಲಾಗಿದೆ. ವಿವಿಧ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮುಂದುವರೆಸಿದ್ದಾರೆ. ವಿದ್ಯುತ್ ಗುತ್ತಿಗೆದಾರರಾಗಿದ್ದು, ಹಲವೆಡೆ ಕಾಮಗಾರಿ ನಡೆಸುತ್ತಿದ್ದಾರೆ. ಆದಾಯ ಮೀರಿದ ಆಸ್ತಿ ಹೊಂದಿದ ಕಾರಣ ದಾಳಿ ನಡೆದಿದೆ ಎನ್ನಲಾಗದೆ.