ಕೊಪ್ಪಳ: ನಗರದ ಬಸವೇಶ್ವರ ವೃತ್ತ ಸಮೀಪ ಕಡಿಮೆ ಬೆಲೆಗೆ ತೊಗರಿ ಬೇಳೆ ಮಾಡುತ್ತಿದ್ದವರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕಳಪೆ ತೊಗರಿ ಬೇಳೆ ವಶಕ್ಕೆ ಪಡೆದಿದೆ.
ಕಲಬುರ್ಗಿ ಮೂಲದ ಕೆಲ ವ್ಯಕ್ತಿಗಳು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ತೊಗರಿ ಬೇಳೆ ಮಾರಾಟ ಮಾಡುತ್ತಿದ್ದರು. ಸಾಕಷ್ಟು ಜನ ಮುಗಿಬಿದ್ದು ಖರೀದಿ ಮಾಡಿದ್ದಾರೆ. ಇದೇ ದಾರಿಯಲ್ಲಿ ತೆರಳುತ್ತಿದ್ದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಬೇಳೆ ಪರಿಶೀಲಿಸಿದ್ದು, ಮೇಲ್ನೋಟಕ್ಕೆ ಕಳಪೆಯಾಗಿ ಕಂಡಿದೆ.
ತಕ್ಷಣ 1.5 ಕ್ವಿಂಟಾಲ್ ಬೇಳೆ ವಶಕ್ಕೆ ಪಡೆದು, ಮಾರಾಟಗಾರರನ್ನು ಕಚೇರಿಗೆ ಕರೆತಂದಿದ್ದಾರೆ. ಪರಿಶೀಲನೆ ಮಾಡಿದಾಗ ಗುಣಮಟ್ಟ ಇಲ್ಲದಿರುವುದು ಹಾಗೂ ವಿಷಪೂರಿತವಾಗಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿಗಳು ಮಧ್ಯಾಹ್ನದ ಊಟಕ್ಕೆ ತೆರಳಿದಾಗ ಮೂತ್ರ ವಿಸರ್ಜನೆ ಮಾಡಿ ಬರುವುದಾಗಿ ಹೇಳಿದ ಮಾರಾಟಗಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಸುಮಾರು ನಾಲ್ಕು ಕ್ವಿಂಟಾಲ್ ತೊಗರಿ ಬೇಳೆ ತಂದಿದ್ದು, ಬಹುಪಾಲು ಮಾರಾಟ ಮಾಡಿದ್ದಾರೆನ್ನಲಾಗಿದೆ.
ಜಿಲ್ಲಾದ್ಯಂತ ವಿವಿಧ ಭಾಗಗಳಲ್ಲೂ ಮಾರಾಟ ಅವ್ಯಾಹತವಾಗಿ ನಡೆದಿದೆ ಎಂಬ ಮಾಹಿತಿಯೂ ಇದೆ. ಆಹಾರ ಸುರಕ್ಷತಾ ಅಧಿಕಾರಿ ಕೃಷ್ಣ ರಾಠೋಡ್ ನೇತೃತ್ವದ ತಂಡ ದಾಳಿ ನಡೆಸಿದೆ.
ಜಿಲ್ಲಾದ್ಯಂತ ಕಳಪೆ ತೊಗರಿ ಬೇಳೆ ಮಾರಾಟ ನಡೆದಿದೆ. ನಮ್ಮ ಗಮನಕ್ಕೂ ಬಂದಿದ್ದು, ದಾಳಿ ನಡೆಸಿ ವಶಕ್ಕೆ ಪಡೆದಿದ್ದೇವೆ. ಜನರು ಕಡಿಮೆ ಬೆಲೆ ಎಂದು ಮೋಸ ಹೋಗಬಾರದು. ಗುಣಮಟ್ಟ ಇಲ್ಲದ, ವಿಷಪೂರಿತ ಬೇಳೆ ಇದಾಗಿದ್ದು, ಸೇವಿಸಿದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
-ಕೃಷ್ಣ ರಾಠೋಡ್. ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಕೊಪ್ಪಳ.