ಕೊಪ್ಪಳ: ನಗರದ ಕುವೆಂಪು ನಗರದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ಗಳನ್ನು ನಗರಸಭೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ಬಡಾವಣೆಯಲ್ಲಿ ಆಶ್ರಯ ಸಮಿತಿ ಹೆಸರಿನಲ್ಲಿ ಕೆಲವೆಡೆ ಖಾಲಿ ಜಾಗವಿದೆ. ಅಲ್ಲಿ ನಿವೇಶನ ನೀಡುವಂತೆ ಕೆಲವರು ಬೇಡಿಕೆ ಸಲ್ಲಿಸಿದ್ದಾರೆ. ಈ ಸಂಬಂಧ ತಿಂಗಳಿನಿಂದ ನಗರಸಭೆ ಮುಂಭಾಗದಲ್ಲಿ ಧರಣಿ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ರಾವೇಂದ್ರ ಹಿಟ್ನಾಳ್ ಭರವಸೆ ಬೆನ್ನಲ್ಲೇ ಮುಷ್ಕರ ಹಿಂಪಡೆದಿದ್ದಾರೆ.
ಡಿ.18ರಂದು ಆಶ್ರಯ ಸಮಿತಿ ಸಭೆ ನಡೆಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.
ಆದರೂ, ಗುರುವಾರ ಕೆಲವರು ಮತ್ತೆ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ನಗರಸಭೆ ಅಧಿಕಾರಿಗಳು ಅದನ್ನು ತಡೆದಿದ್ದಾರೆ.
ಈ ವೇಳೆ ಶೆಡ್ ನಿರ್ಮಾಣಕ್ಕೆ ಮುಂದಾದವರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತಿಂಗಳ ಹಿಂದೆ ನಿರ್ಮಸಿದ್ದ ಮತ್ತೆರೆಡು ಶೆಡ್ಗಳನ್ನು ತೆರವುಗೊಳಿಸುವಂತೆ ನಗರಸಭೆಯಿಂದ ನ.8ರಂದು ನೋಟಿಸ್ ಜಾರಿಗೊಳಿಸಲಾಗಿದೆ.
ತಿಂಗಳಾದರೂ ತೆಗೆಯದ ಕಾರಣ ಶುಕ್ರವಾರ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.
ನಗರದಲ್ಲಿನ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಭೂಮಿ ಖರೀದಿಗೆ ಟೆಂಡರ್ ಕರೆದಿದ್ದೇವೆ. ಮುಷ್ಕರ ನಡೆಸುತ್ತಿದ್ದವರಿಗೆ ಸಭೆ ನಡೆಸಿ ನಿವೇಶನ ಹಂಚಿಕೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಆದರೂ, ಕೆಲವರು ಶೆಡ್ ಹಾಕಲು ಮುಂದಾಗಿದ್ದು, ಅವುಗಳನ್ನು ತೆರವು ಮಾಡಿದ್ದೇವೆ. ತಿಂಗಳ ಹಿಂದೆ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವಿಗೆ ನೋಟಿಸ್ ನೀಡಿದ್ದು, ತೆರವು ಮಾಡದ ಕಾರಣ ನಾವೇ ಮಾಡಿದ್ದೇವೆ.
ಗಣಪತಿ ಪಾಟೀಲ್. ನಗರಸಭೆ ಪೌರಾಯುಕ್ತ ಕೊಪ್ಪಳ.