ಕೊಪ್ಪಳ: ಹುಬ್ಬಳ್ಳಿ ಎಚ್ಜಿಸಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್ನಿಂದ ಕೊಪ್ಪಳದಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಮಂಗಳವಾರದಂದು ಕ್ಯಾನ್ಸರ್ ರೋಗಿಗಳಿಗೆ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ರೋಗಿಗಳು ಸದುಪಯೋಗ ಪಡೆಯಬೇಕೆಂದು ಕ್ಯಾನ್ಸರ್ ಶಸ್ತ್ರಚಿಕಿತ್ಸ ಡಾ.ಸಂತೋಷ ಚಿಕ್ಕರಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪ್ರತಿ ಒಂದು ಲಕ್ಷ ಜನರಲ್ಲಿ 100 ಜನರಿಗೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲಿನಂತೆ ಕ್ಯಾನ್ಸರ್ ಬಂದರೆ ಸಾಯುತ್ತಾರೆ ಎಂಬಂತಿಲ್ಲ. ವೈದ್ಯಕಿಯ ರಂಗ ಸುಧಾರಿದಿದೆ. ಮೊದಲೆರೆಡು ಹಂತದಲ್ಲಿ ರೋಗ ಪತ್ತೆ ಮಾಡಿದಲ್ಲಿ ಸಂಪೂರ್ಣ ಗುಣಪಡಿಸಬಹುದು. ನಮ್ಮ ಆಸ್ಪತ್ರೆಯಿಂದ ಕೊಪ್ಪಳದ ಗವಿಮಠ ಆಯುರ್ವೇದಿಕ್ ಕಾಲೇಜು, ಖುಷಿ ಆಸ್ಪತ್ರೆ, ಕಲಾಲ್ ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳಲ್ಲಿ ಎರಡು ದಿನ ಉಚಿತ ತಪಾಸಣೆ ನಡೆಸುತ್ತಿದ್ದೇವೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆವರೆಗೆ ವೈದ್ಯರು ಲಭ್ಯವಿರಲಿದ್ದಾರೆ ಎಂದರು.
ಕೊಪ್ಪಳ ಭಾಗದಲ್ಲಿ ಮಹಿಳೆಯಲ್ಲಿ ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಪುರುಷರಲ್ಲಿ ಅನ್ನನಾಳ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಆಯುಷ್ಮಾನ್ ಭಾರತ, ಇಎಸ್ಐ, ಕರ್ನಾಟಕ ಆರೋಗ್ಯ ಸಂಜೀವಿನಿ ಸೇರಿ ಸರ್ಕಾರದ ಯೋಜನೆಗಳು ಮತ್ತು ಖಾಸಗಿ ವಿಮಾ ಕಂಪನಿಗಳ ಸೌಲಭ್ಯಗಳು ನಮ್ಮ ಆಸ್ಪತ್ರೆಯಲ್ಲಿವೆ. ತಪಾಸಣೆ ಉಚಿತ ನಡೆಸಿ, ಯೋಜನೆಗಳಡಿ ಉಚಿತವಾಗಿಯೇ ಆರೈಕೆ ಮಾಡಲಾಗುವುದು. ಬೇರೆ ಬೇರೆ ಜಿಲ್ಲೆಗಳಲ್ಲೂ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಡಾ.ಆದರ್ಶ ಹೆಗಡೆ ಇದ್ದರು.