ಕೊಪ್ಪಳ: ಆಹಾರ ಕ್ರಮ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿಯಿಂದ ಮಾರಕ ಕಾಯಿಲೆಗಳು ಬರುತ್ತಿವೆ ಎಂದು ಡಿಎಚ್ಒ ಡಾ. ಟಿ.ಲಿಂಗರಾಜು ಹೇಳಿದರು.
ನಗರದ ಹಳೇ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ಕ್ಯಾನ್ಸರ್ ದಿನಾಚರಣೆ ಮಾಡಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ನಿಯಂತ್ರಿಸುವುದು ಕಾರ್ಯಕ್ರಮ ಉದ್ದೇಶ. ಅನಾರೋಗ್ಯಕರ ಜೀವನ ಶೈಲಿ ಕಾರಣ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಕೆಲವೊಂದು ರೋಗ ವೈದ್ಯಲೋಕಕ್ಕೆ ಸವಾಲಾಗಿವೆ. ಮನುಷ್ಯ ಆಧುನಿಕನಾದಂತೆ ಆತನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥಯ ಹಾಳಾಗುತ್ತಿದೆ. ಆಹಾರಕ್ರಮದಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆ ಇಲ್ಲದ ಜೀವನ ಶೈಲಿ ಹಾಗೂ ಮಾನಸಿಕ ಒತ್ತಡದಿಂದ ರೋಗಗಳು ಉಲ್ಬಣಗೊಳ್ಳುತ್ತಿವೆ. ಅವುಗಳಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ ಎಂದರು.
ದೇಹದ ಯಾವುದೇ ಅಂಗಕ್ಕೆ ಬಹುವ ಮಾರಕ ಕಾಯಿಲೆಯೇ ಕ್ಯಾನ್ಸರ್. ನಮ್ಮ ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್ ರೋಗಿಗಳ ಸಾಲಿಗೆ ಸೇರುತ್ತಿದ್ದಾರೆ. ತಂಬಾಕು, ಮದ್ಯಪಾನದಿಂದ ದೂರವಿರುವ ಶಿಸ್ತುಬದ್ಧ ಜೀವನ ಶೈಲಿ, ಪೌಷ್ಠಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ, ಒಳ್ಳೆಯ ಆರೋಗ್ಯಕರ ಅಭ್ಯಾಸ, ದೈಹಿಕವಾಗಿ ಸದಾ ಚಟುವಟಿಕೆಯಿಂದ ಇರುವುದರಿಂದ ಬಹುಪಾಲು ರೋಗಗಳಿಂದ ದೂರ ಇರಬಹುದು. ಗ್ರಾಮ ಮತ್ತು ನಗರಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿ ಕ್ಯಾನ್ಸರ್ ನಿಯಂತ್ರಣದ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿ. ಕ್ಯಾನ್ಸರ್ಮುಕ್ತ ಕೊಪ್ಪಳ ಜಿಲ್ಲೆಯಾಗಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು.
ಜನ ಜಾಗೃತಿ ಜಾಥಾ ಹಳೇ ಜಿಲ್ಲಾಸ್ಪತ್ರೆ ಆವರಣದಿಂದ ಅಶೋಕ ಸರ್ಕಲ್, ಜವಾಹರ ರಸ್ತೆ, ದಿವಟರ್ ಸರ್ಕಲ್, ಡಾ.ಸಿಂಪಿಲಿಂಗಣ್ಣ ರಸ್ತೆ, ಕಾರ್ಮಿಕರ ಸರ್ಕಲ್, ಬಸ್ನಿಲ್ದಾಣ ಮಾರ್ಗವಾಗಿ ಸಾಗಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಆರ್ಸಿಎಚ್ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ ಎಂ.ಎಚ್., ಕ್ಷಯ ರೋಗ ನಿಮೂರ್ಲನಾಧಿಕಾರಿ ಡಾ.ಶಶಿಧರ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಪ್ರಕಾಶ ಎಚ್., ಡಾ.ವೆಂಕಟೇಶ, ಡಾ.ರಾಮಾಂಜನೇಯ, ಡಾ.ಜಯಶ್ರೀ ಇತರರಿದ್ದರು.