ಕೊಪ್ಪಳ: ಮನೆಯಲ್ಲಿ ಅಚಾನಕ್ ಆಗಿ ಸಿಲುಕಿಕೊಂಡಿದ್ದ 21 ತಿಂಗಳ ಮಗುವನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಿಸಿದ್ದು, ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಎಸ್ಪಿ ಕಚೇರಿ ಡಿಸಿಆರ್ ಬಿ ವಿಭಾಗದ ಸಿಪಿಐ ಸುರೇಶ ಅವರ ಮಗು ಭಾನುವಾರ ಆಟವಾಡುತ್ತ ಕೋಣೆಯೊಳಗೆ ಹೋಗಿದೆ. ಡೋರ್ ಲಾಕ್ ಆಗಿದ್ದು, ತೆಗೆಯಲು ಬಂದಿಲ್ಲ. ಹೊರಗಿನಿಂದಲೂ ತೆಗೆಯಲು ಆಗಿಲ್ಲ.
ಹೊರಗಿದ್ದ ತಾಯಿ ತೆಗೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಮಗು ಹಾಗೂ ತಾಯಿ ಗಾಬರಿಯಾಗಿದ್ದಾರೆ. ಅತ್ತು ಸುಸ್ತಾಗಿದ್ದಾರೆ.
ತಕ್ಷಣ ನೆರವಿಗೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳು ಲ್ಯಾಡರ್ ಸಹಾಯದಿಂದ ಕಿಟಕಿ ಬಳಿ ಬಂದಿದ್ದಾರೆ. ಮಗುವನ್ನು ಕರೆದು ಗಮನ ಬೇರೆಡೆ ಸೆಳೆದಿದ್ದಾರೆ.
ಬಳಿಕ ಇತರ ಸಿಬ್ಬಂದಿ ಲಾಕರ್ ನ್ನು ಕ್ರೋಬರ್, ಸುತ್ತಿಗೆ ಹಾಗೂ ಬೋಲ್ಟ್ ಕಟರ್ ಬಳಸಿ ಲಾಕ್ ತೆಗೆದು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ವಿನಾಯಕ, ಸಿಬ್ಬಂದಿ ತೇಜಸ್ವಿಕುಮಾರ, ಫಕೀರಪ್ಪ, ಮಂಜುನಾಥ, ಶರಣಪ್ಪ, ಚೇತನ, ಚಾಲಕ ಅಮರೇಶ ಕಾರ್ಯಾಚರಣೆ ನಡೆಸಿದ್ದು, ಮಗುವಿನ ಕುಟುಂಬದವೆಉ ಹಾಗೂ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ