ಮುಧೋಳ : ಸರ್ಕಾರ ಜಮೀನು ಖರೀದಿಸಿ ಉತಾರ ಕೊಟ್ಟ ನಂತರ ಮನೆಗಳನ್ನು ಕಟ್ಟಿಕೊಡಲಾಗುತ್ತದೆ. ಅದಕ್ಕೂ ಮುಂಚೆ ತಾಲೂಕು ಅಧಿಕಾರಿಗಳು ಸದ್ಯ ತಾತ್ಕಾಲಿಕವಾಗಿ ಸೂಕ್ತ ಕ್ರಮ ಕೈಗೊಳ್ಳುವರು. ಯಾರಾದರೂ ಸರ್ಕಾರಕ್ಕೆ ಜಮೀನು ಕೊಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ತಾಲೂಕಿನ ರೂಗಿಯ ಹೊರವಲಯದಲ್ಲಿರುವ ಎಸ್ಸಿ ಕಾಲನಿಗೆ ಮಳೆ ನೀರು ನುಗ್ಗಿ ಹಾನಿಯಾದ ಪ್ರದೇಶ ಹಾಗೂ ಕಾಳಜಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ತಾತ್ಕಾಲಿಕವಾಗಿ ಈ ಕಾಲನಿಯಲ್ಲಿ ಸೂಕ್ತ ಚರಂಡಿ ನಿರ್ಮಿಸಿ ಮಳೆಯ ನೀರು ಬೇರೆಡೆ ಸಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ನಂತರ ಕಾಳಜಿ ಕೇಂದ್ರದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಜಿಪಂ ಸಿಇಒ ಟಿ.ಭೂಬಾಲನ್, ತಾಪಂ ಇಒ ಕಿರಣ ಘೋರ್ಪಡೆ, ಸೋಮಶೇಖರ ಸಾವನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ. ಕೋರಡ್ಡಿ, ತಾಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಕಾಂಗ್ರೆಸ್ ಮುಖಂಡ ಸದಾಶಿವ ಹೊಸಮನಿ, ಹನುಮಂತ ಕಳ್ಳಿಮನಿ, ಮಹದೇವ ಮಾದರ, ಶಂಕರ ಮಾದರ, ಅರ್ಜುನ ಗಾಜಾಗೋಳ ಇತರರಿದ್ದರು.