ವಿರಾಜಪೇಟೆ: ಹೆಗ್ಗಳ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಬಿಎ ವಿಭಾಗದ ವಿದ್ಯಾರ್ಥಿಗಳು, ಸ್ವೆಟರ್, ನೀರಿನ ಬಾಟಲ್ ಹಾಗೂ ಪಠ್ಯ ಪರಿಕರ ವಿತರಿಸಿದರು.
ಅಂತಿಮ ಪದವಿ ಬಿಬಿಎ ವಿದ್ಯಾರ್ಥಿಗಳಾದ ಕಾವೇರಪ್ಪ ಹಾಗೂ ಐಶ್ವರ್ಯ ಇದೇ ವೇಳೆ ಮಕ್ಕಳಿಗೆ ಆರೋಗ್ಯ ಜಾಗೃತಿ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿಡುವ ಕುರಿತು ಸಲಹೆ ನೀಡಿದರು.
ವಿದ್ಯಾರ್ಥಿ ಶಾಹಿದ್ ಆಲಿ ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು. ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಸಿಹಿ ವಿತರಿಸಲಾಯಿತು.
ಸೇಂಟ್ ಆನ್ಸ್ ಪದವಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ಬಿ. ಡಿ.ಹೇಮಾ, ಪ್ರಾಧ್ಯಾಪಕಿಯಾದ ಎಂ.ಟಿ.ನಿರ್ಮಲಾ, ಶಿಲ್ಪಾ, ಟಿನ್ಸಿ ಶಾಲಾ ಮುಖ್ಯಶಿಕ್ಷಕಿ ಕಮಲಮ್ಮ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.