ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಎಡದಂಡೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ನೀರು ಬಳಕೆದಾರರ ಸಹಕಾರ ಸಂ ಹುಲಿಗಿ ನೇತೃತ್ವದಲ್ಲಿ ರೈತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಆಣೆಕಟ್ಟು ಕಟ್ಟುವ ಮುನ್ನವೇ ವಿಜಯನಗರ ಕಾಲುವೆಗಳಿಗೆ ನೀರಾವರಿ ಸೌಲಭ್ಯವಿದೆ. ಬಚಾವತ್ ಆಯೋಗ ವರದಿಯಲ್ಲೂ ನಮಗೆ ವಿಶೇಷ ಅವಕಾಶ ಕಲ್ಪಿಸಿ ನೀರು ಮೀಸಲಿಡಲಾಗಿದೆ. ಈ ವರ್ಷ ಜಲಾಶಯಕ್ಕೆ ನಿರೀತ ನೀರು ಹರಿದು ಬಂದಿಲ್ಲ. ಆದರೆ, ತುಂಗಭದ್ರಾ ಎಡದಂಡೆ ವಿಜಯನಗರ ಕಾಲುವೆ ಡಿಸ್ಟ್ರಿಬ್ಯೂಟರ್ 1ರಿಂದ 11ಎ ವ್ಯಾಪ್ತಿಯಲ್ಲಿ ವಿವಿಧ ಬೆಳೆ ಬೆಳೆಯಲಾಗಿದೆ. ಸದ್ಯ ನೀರು ನಿಲ್ಲಿಸಿದ್ದು, ಬೆಳೆಗಳಿಗೆ ತೊಂದರೆ ಆಗುತ್ತಿದೆ ಎಂದರು.
ಜಲಾಶಯದಲ್ಲಿ ಕುಡಿಯಲು ಬೇಕಾಗುವಷ್ಟು ನೀರು ಸಂಗ್ರಹವಿದೆ. ಕಾಲುವೆಗಳಿಗೆ ಬಿಡುವುದಿಲ್ಲವೆಂದು ತೀರ್ಮಾನಿಸಲಾಗಿದೆ. ಆದರೆ, ಬಲದಂಡೆ ವ್ಯಾಪ್ತಿಯಲ್ಲಿ ಎಚ್ಎಲ್ಸಿ ಮೂಲಕ 0.5 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ. ನಮಗೆ ನಿತ್ಯ 65 ಕ್ಯೂಸೆಕ್ನಂತೆ 100 ದಿನಕ್ಕೆ 6500 ಕ್ಯೂಸೆಕ್ ನೀರು ಬಿಟ್ಟರೆ ಸಾಕು. ಬಾಳೆ, ತೆಂಗು ಸೇರಿ ಇತರ ಬೆಳೆಗಳಿಗೆ ಅನುಕೂಲವಾಗಲಿದೆ. ಕುಡಿವ ನೀರು ಬಿಟ್ಟು ಇತರ ನೀರು ಪೂರೈಸಲು ಅವಕಾಶವಿದೆ ಎಂದು ಮನವಿ ಮಾಡಿದರು. ಬೇಡಿಕೆ ಈಡೇರಿಸುವವರೆಗೆ ಧರಣಿ ನಡೆಸುವುದಾಗಿ ತಿಳಿಸಿದರು.
ರೈತರಾದ ಜನಾರ್ದನ ಹುಲಿಗಿ, ಗೌರೀಶ ಬಾಗೋಡಿ, ರಾಮಗೌಡ ರಾಂಪೂರ, ಜನಾದ್ರಿ ಲಿಂಗಪ್ಪ, ಗಾಳೆಪ್ಪ, ವಿಶ್ವನಾಥ ರಾಜು, ಯಂಕಪ್ಪ ಹೊಸಳ್ಳಿ, ಶರಣಪ್ಪ ಇತರರಿದ್ದರು.