ನವದೆಹಲಿ: ರೈತರ ಹೋರಾಟಕ್ಕೆ ಸಂಬಂಧಪಟ್ಟಂತೆ ಟೂಲ್ಕಿಟ್ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿ ನೆರವಿಗೆ ದೆಹಲಿ ಮಹಿಳಾ ಆಯೋಗ ಧಾವಿಸಿದೆ.
ಈ ಕುರಿತು ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸ್ ಕಮೀಷನರ್ಗೆ ಹಾಗೂ ಅಲ್ಲಿನ ಸೈಬರ್ ಸೆಲ್ ವಿಭಾಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ದಿಶಾ ರವಿ ಬಂಧನವನ್ನು ಖಂಡಿಸಿರುವ ಆಯೋಗ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಎಫ್ಐಆರ್ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಲು ಸೂಚಿಸಿದೆ. ಇನ್ನು ದಿಶಾ ರವಿ ಬಂಧನದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಉತ್ತರಿಸಿರುವ ದೆಹಲಿ ಪೊಲೀಸ್ ಕಮೀಷನರ್ ಶ್ರೀವಾತ್ಸವ್, ‘ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. 22 ವರ್ಷದವರಿಗೂ ಹಾಗೂ 50 ವರ್ಷದವರಿಗೂ ಕಾನೂನು ಒಂದೇ. ಕಸ್ಟಡಿಗೆ ತೆಗೆದುಕೊಳ್ಳುವ ಮುನ್ನ ದಿಶಾ ರವಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು’ ಎಂದು ಅವರು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆದ ಹಿಂಸಾಚಾರದ ಬೆನ್ನಲ್ಲೇ ಟೂಲ್ಕಿಟ್ ಟ್ವೀಟ್ ಮಾಡಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಸಿಕ್ಕಿಬಿದ್ದಿದ್ದಳು. ಹಿಂಸಾಚಾರ ಹೇಗೆ ಆರಂಭಿಸಬೇಕು, ಯಾವ್ಯಾವ ಕಡೆಗಳಲ್ಲಿ ಪ್ರತಿಭಟನೆ ಮಾಡಬೇಕು ಎಂಬೆಲ್ಲಾ ಅಂಶಗಳನ್ನು ಹೊಂದಿದ್ದ ರಹಸ್ಯಮಯ ಈ ದಾಖಲೆ ಗ್ರೇಟಾಳಿಗೆ ದಿಶಾ ರವಿ ಶೇರ್ ಮಾಡಿಕೊಂಡು ಪೇಚಿಗೆ ಸಿಲುಕಿದ್ದಳು. ಫೆ 14 ರಂದು ದಿಶಾಳನ್ನು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ದೆಹಲಿ ಪೊಲೀಸರು ಬಂಧಿಸಿ ಕರೆದೋಯ್ದಿದ್ದರು.
(ಏಜೇನ್ಸಿಸ್)
ಗ್ರೆಟಾ ಜತೆ ದಿಶಾ ಸಂಭಾಷಣೆ ಹೇಗಿತ್ತು ಗೊತ್ತಾ? ಟೂಲ್ಕಿಟ್ನಲ್ಲಿತ್ತು ಈ ಎಲ್ಲ ಮಾಹಿತಿಗಳು!