ಎನ್.ಆರ್.ಪುರ: ದಡರಾ ರುಬೆಲ್ಲಾ ರೋಗ ನಿರ್ಮೂಲನೆಯಲ್ಲಿ ಮಿಷನ್ ಇಂದ್ರಧನಷ್ ಪರಿಣಾಮಕಾರಿ ಎಂದು ಸರ್ಕಾರಿ ಆಸ್ಪತ್ರೆ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿಜಯಕುಮಾರ್ ಹೇಳಿದರು.
ಹೌಸಿಂಗ್ ಬೋರ್ಡ್ ಅಂಗನವಾಡಿ ಕೇಂದ್ರದಲ್ಲಿ ನಡೆದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದ ಮೂರನೇ ಸುತ್ತಿನ ತಾಲೂಕು ಮಟ್ಟದ ಲಸಿಕ ಶಿಬಿರದ ಉದ್ಘಾಟಿಸಿ ಮಾತನಾಡಿ, ಆ.7ರಂದು ಪ್ರಾರಂಭವಾದ ಈ ಅಭಿಯಾನ ಮೂರು ಸುತ್ತಿನಲ್ಲಿ ನಡೆದು ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದರು.
ಲಸಿಕಾ ಕರಣದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸುವುದು,ಬಿಟ್ಟು ಹೋಗಿರುವ ಮತ್ತು ಅಲೆಮಾರಿ ಮಕ್ಕಳನ್ನು ಗುರುತಿಸಿ ಅವರಿಗೆ ಲಸಿಕೆ ನೀಡುವುದು, 2023ಕ್ಕೆ ದಡಾರ ರುಬೇಲ್ಲಾ ರೋಗ ನಿರ್ಮೂಲನೆ ಮಾಡುವುದು ಮಿಷನ್ ಇಂದ್ರಧನುಷ್ ಅಭಿಯಾನದ ಮುಖ್ಯಗುರಿ ಎಂದರು.
ಆಶಾ ಕಾರ್ಯಕರ್ತೆಯರು ಮೂರು ತಿಂಗಳು ಲಸಿಕಾ ಶಿಬಿರದ ಮೊದಲು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಗರ್ಭಿಣಿಯರು ಮತ್ತು ಲಸಿಕಾಕರಣಕ್ಕೆ ನಿಗಧಿಯಾಗಿರುವ ಮಕ್ಕಳ ಸಮೀಕ್ಷೆ ನಡೆಸಿರುತ್ತಾರೆ. ಅ.9ರಿಂದ 14ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ನಲ್ಲಿ ಒಟ್ಟು 13 ಶಿಬಿರಗಳನ್ನು ನಿಗದಿಮಾಡಿದ್ದು, ಇದರಲ್ಲಿ 66 ಮಕ್ಕಳು 15 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಆಗಸ್ಟ್ ನಲ್ಲಿ 20 ಮತ್ತು ಸೆಪ್ಟೆಂಬರ್ನಲ್ಲಿ 15 ಶಿಬಿರಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಪಪಂ ಸದಸ್ಯೆ ಸುರಯ್ಯಭಾನು ಮಾತನಾಡಿ, ಯಾವ ಮಕ್ಕಳು ಕೂಡ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಸುಪ್ರಿತಾ, ನಮಿತಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಇದ್ದರು.