ಬೆಂಗಳೂರು: ಕನ್ನಡತಿ, ಬಹುಭಾಷಾ ನಟಿ ಸೌಂದರ್ಯ ಬದುಕಿದಿದ್ದರೆ ಅವರಿಗೆ 47 ವರ್ಷಗಳಾಗಿರುತ್ತಿದ್ದವು. ಆದರೆ, ಸೌಂದರ್ಯ ಇಂದಿಗೆ ದುರಂತ ಅಂತ್ಯ ಕಂಡು 16 ವರ್ಷವಾಯ್ತು. ಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿ ಸಿನಿಮಾರಂಗಕ್ಕೆ ಶಾಕ್ ನೀಡಿ ಬಾರದ ಲೋಕಕ್ಕೆ ತೆರಳಿದ್ದರು. ಹಾಗೆ ಸಾಯುವಾಗ ಸೌಂದರ್ಯ ಏಳು ತಿಂಗಳ ಗರ್ಭಿಣಿ! ಹೌದು, ಸೌಂದರ್ಯ ಕುಟುಂಬಸ್ತರು ಮತ್ತು ಅವರ ಕೆಲ ಆಪ್ತರನ್ನು ಹೊರತು ಪಡಿಸಿದರೆ, ಈ ಸುದ್ದಿ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಗರ್ಭಿಣಿ ಆಗಿದ್ದಕ್ಕೆ ಸಿನಿಮಾಕ್ಷೇತ್ರಕ್ಕೆ ಗುಡ್ಬೈ ಹೇಳುವ ಬಗ್ಗೆ ಸೌಂದರ್ಯ ನಿರ್ಧರಿಸಿದ್ದರು. ಇದೀಗ ದಶಕದ ಹಿಂದಿನ ಆ ಸುದ್ದಿಯನ್ನು ತಮಿಳು ನಿರ್ದೇಶಕ ಆರ್.ವಿ ಉದಯ್ಕುಮಾರ್ ನೆನಪು ಮಾಡಿಕೊಂಡಿದ್ದಾರೆ.
‘ನಟಿ ಸೌಂದರ್ಯ ಸಾಯುವ ಕೆಲ ದಿನಗಳ ಹಿಂದಷ್ಟೇ ನನ್ನ ಬಳಿ ಬಂದು ಸಿನಿಮಾ ಕ್ಷೇತ್ರವನ್ನು ಕೈಬಿಡುವುದಾಗಿ ಹೇಳಿದ್ದರು. ಚಂದ್ರಮುಖಿ ನನ್ನ ಕೊನೇ ಸಿನಿಮಾ ಎಂದಿದ್ದರು. ಗರ್ಭಿಣಿ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದರು. ಹಾಗೇ ಸುದೀರ್ಘ ಒಂದು ಗಂಟೆಗಳ ಕಾಲ ಇಬ್ಬರು ಮಾತನಾಡಿದ್ದವು. ಆದರೆ ಮಾರನೇ ದಿನವೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿತ್ತು. ಅವಳು ಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಟಿವಿಯಲ್ಲಿ ಬಿತ್ತರವಾದ ಸುದ್ದಿ ನೋಡಿ ಗೊತ್ತಾಯಿತು’ ಎಂದು ನಿರ್ದೇಶಕ ಆರ್.ವಿ ಉದಯ್ಕುಮಾರ್ ವಿವರಿಸುತ್ತಾರೆ. ಅಂದಹಾಗೆ, ಉದಯ್ಕುಮಾರ್ ನಿರ್ದೇಶನದ ‘ಪೊಣ್ಣುಮಣಿ’, ‘ತಾರಕ್ ರಾಮುಡು’ ಸಿನಿಮಾಗಳಲ್ಲಿ ಸೌಂದರ್ಯ ನಟಿಸಿದ್ದರು.