ಅಥಣಿ: ಜನರ ಗಮನ ಬೇರೆಡೆ ಸೆಳೆಯಲು ಡಿ.ಕೆ. ಶಿವಕುಮಾರ ಅವರು ಬಿಜೆಪಿ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಮಾಡುವ ಅವಶ್ಯಕತೆ ಸರ್ಕಾರಕ್ಕಿಲ್ಲ. ಡಿಕೆಶಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಬಂದಿರುವ ಆರೋಪ ಮರೆಮಾಚಲು ಸುಮ್ಮನೆ ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ಗೆ ಧಮ್ಕಿ ಹಾಕಿರುವ ಅವರ ಸಂಸ್ಕೃತಿ ಏನೆಂಬುದನ್ನು ಎತ್ತಿ ತೋರಿಸುತ್ತದೆ. ಯಾರೇ ಗಲಾಟೆ ಮಾಡಿರಬಹುದು. ಅಂಥ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ. ಡಿಕೆಶಿ ಅವರ ಗೊಡ್ಡು ಬೆದರಿಕೆ ಹಾಗೂ ಹೇಳಿಕೆಗೆ ಸರ್ಕಾರ ಹೆದರುವುದಿಲ್ಲ. ಯಾವ ಅಧಿಕಾರಿಯೂ ಹೆದರುವುದಿಲ್ಲ ಎಂದು ಹೇಳಿದರು.