ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅಂಡರ್ವರ್ಲ್ಡ್ ಡಾನ್ ಕರೀಮ್ ಲಾಲ್ರನ್ನು ಭೇಟಿ ಮಾಡಿದ್ದರು ಎಂಬ ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿಕೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ಮುಂಬೈ ಅಂಡರ್ವರ್ಲ್ಡ್ನಿಂದ ಕಾಂಗ್ರೆಸ್ ಫಂಡ್ ಪಡೆಯುತಿತ್ತೇನೋ? ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಂಶಯ ವ್ಯಕ್ತಪಡಿಸಿದ್ದಾರೆ.
ಇದರಿಂದ ರಾಜ್ಯದಲ್ಲಿ ರಾಜಕೀಯ ಅಪರಾಧೀಕರಣದ ಆರಂಭವಾಗಿರಬಹುದೇ? ಮುಂಬೈ ಮೇಲೆ ದಾಳಿ ನಡೆಸಿದವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿರಬಹುದೇ? ಆ ದಿನಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ತೋಳ್ಬಲ ಉಪಯೋಗಿಸಿತ್ತೆ ಎಂದು ಫಡ್ನವಿಸ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು: ಸಂಜಯ್ ರಾವತ್
ಬುಧವಾರ ಮರಾಠಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್ ರಾವತ್ ಮಾತನಾಡಿ, ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್ವರ್ಲ್ಡ್ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್ ಹಾಜಿ ಮಸ್ತಾನ್ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್ ರಾವತ್ ಬಿಚ್ಚಿಟ್ಟಿದ್ದರು. ಇದು ಎಲ್ಲೆ ತೀವ್ರ ಚರ್ಚೆ ಹುಟ್ಟು ಹಾಕಿದೆ. (ಏಜೆನ್ಸೀಸ್)