ನವದೆಹಲಿ: ಬಾಲಿವುಡ್ ಯುವನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಅವರ ಸಹೋದ್ಯೋಗಿ ಕಲಾವಿದರು, ರಾಜಕಾರಣಿಗಳು, ಕ್ರಿಕೆಟ್ ಆಟಗಾರರೆಲ್ಲ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿವೃತ್ತಿಯಲ್ಲಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದ ನಟ ಸುಶಾಂತ್ ಸಿಂಗ್ ಸಾವಿನಿಂದ ಅವರ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ. ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶೋಕ ವ್ಯಕ್ತಪಡಿಸಿದ್ದಾರೆ.
ಆದರೆ ಈ ವಿಚಾರದಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸುದ್ದಿಯಾಗಿದ್ದರು. ರಾಹುಲ್ ಗಾಂಧಿಯವರು ಸುಶಾಂತ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡುವಾಗ, ಸುಶಾಂತ್ ಒಬ್ಬ ಕ್ರಿಕೆಟರ್ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿತ್ತು. ಒಬ್ಬ ನಟನನ್ನು ರಾಹುಲ್ ಗಾಂಧಿ ಕ್ರಿಕೆಟರ್ ಎಂದು ಹೇಳಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗಿತ್ತು.
ಟ್ವಿಟರ್ ಬಳಕೆದಾರ ಪಿಯುಶ್ ರಂಜನ್ ಎಂಬುವರು ರಾಹುಲ್ ಗಾಂಧಿಯವರು ಮಾಡಿದ ಟ್ವೀಟ್ನ ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದರು. ರಾಹುಲ್ ಅಧಿಕೃತ ಖಾತೆಯ ಟ್ವೀಟ್ನ ಸಾರಾಂಶ ಹೀಗಿತ್ತು. ಪ್ರತಿಭಾವಂತ ಕ್ರಿಕೆಟರ್ ಆಗಿದ್ದ ಸುಶಾಂತ್ ಅವರ ಸಾವಿನ ಸುದ್ದಿ ಕೇಳಿ ತುಂಬ ನೋವಾಯಿತು. ತುಂಬ ಬೇಗನೇ ಹೋಗಿಬಿಟ್ಟರು. ಅವರ ಸಾವಿನ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ದೇವರು ನೀಡಲಿ ಎಂದು ಇತ್ತು.
ಈ ಟ್ವೀಟ್ ನೋಡುತ್ತಲೇ ಅನೇಕರು ಕಾಮೆಂಟ್ ಮಾಡಿದ್ದರು. ರಾಹುಲ್ ಗಾಂಧಿಯವರು ಸುಶಾಂತ್ ಅವರನ್ನು ಕ್ರಿಕೆಟರ್ ಎಂದು ಯಾಕೆ ಅಂದುಕೊಂಡರು? ಅವರಿಗೆ ಸುಶಾಂತ್ ಒಬ್ಬ ನಟ ಎಂಬುದೂ ಗೊತ್ತಿಲ್ಲವಾ? ಎಂದೆಲ್ಲ ಕೆಲವರು ಟೀಕಿಸಲು ಶುರು ಮಾಡಿದ್ದರು. ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್: ಭರ್ಜರಿ ಮಾರಾಟ
ಆದರೆ ಈ ಟ್ವೀಟ್ ನಿಜವಲ್ಲ ಎಂಬುದು ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂನ ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ. ರಾಹುಲ್ ಗಾಂಧಿಯವರು ಮಾಡಿದ ಟ್ವೀಟ್ನ್ನು ತಿರುಚಲಾಗಿದೆ. ಅವರು ತಮ್ಮ ಟ್ವೀಟ್ನಲ್ಲಿ ಸುಶಾಂತ್ ಒಬ್ಬ ನಟ ಎಂದೇ ಉಲ್ಲೇಖಿಸಿದ್ದಾರೆ ಹೊರತು, ಕ್ರಿಕೆಟರ್ ಎಂದು ಬರೆದಿಲ್ಲ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: PHOTOS| ಚೂಟಿ ಹುಡುಗನ ನೆನಪುಗಳು; ಸುಶಾಂತ್ ಸಿಂಗ್ ಬಾಲ್ಯದ ಫೋಟೋಗಳನ್ನು ನೀವು ನೋಡಲೇಬೇಕು..
ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಡಲಾಗಿದ್ದ ಒರಿಜಿನಲ್ ಟ್ವೀಟ್ನ್ನು ತಿರುಚಿ, ಆ್ಯಕ್ಟರ್ ಎಂದು ಬರೆದುಕೊಂಡಿದ್ದ ಜಾಗದಲ್ಲಿ ಕ್ರಿಕೆಟರ್ ಎಂದು ಮಾಡಲಾಗಿದೆ. ನೈಜ ಟ್ವೀಟ್ ಮತ್ತು ವೈರಲ್ ಆದ ಫೇಕ್ ಟ್ವೀಟ್ನ ಸಮಯಗಳೂ ಒಂದೇ ಇವೆ. ಎರಡೂ ಕೂಡ ಸಂಜೆ 7.31 ಎಂದು ಟೈಮ್ ತೋರಿಸುತ್ತಿವೆ. ಒಂದೊಮ್ಮೆ ಏನಾದರೂ ರಾಹುಲ್ ಗಾಂಧಿಯವರು ತಮ್ಮ ಟ್ವಿಟರ್ನಲ್ಲಿ ಕ್ರಿಕೆಟರ್ ಎಂದು ಬರೆದು, ನಂತರ ಅದನ್ನು ಡಿಲೀಟ್ ಮಾಡಿ, ಆ್ಯಕ್ಟರ್ ಎಂದು ಸರಿಪಡಿಸಿ ಮತ್ತೊಮ್ಮೆ ಟ್ವೀಟ್ ಮಾಡಿದ್ದರೆ ಸಮಯ ಬೇರೆ ತೋರಿಸಬೇಕಿತ್ತು. ಕೆಲವೇ ನಿಮಿಷಗಳಾದರೂ ವ್ಯತ್ಯಾಸ ಆಗಬೇಕಿತ್ತು. ಆದರೆ ಹಾಗೇನೂ ಆಗದ ಕಾರಣ, ರಾಹುಲ್ ಗಾಂಧಿ ಅಧಿಕೃತ ಖಾತೆಯಿಂದ ಮಾಡಲಾದ ಟ್ವೀಟ್ ಸರಿಯಾಗಿಯೇ ಇತ್ತು. ಅದನ್ನು ಯಾರೋ ತಿರುಚಿ, ವೈರಲ್ ಮಾಡಿದ್ದಾರೆ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ತೇಜಸ್ವಿನಿ ಪ್ರಕಾಶ್ ಸಾವಿನ ಸುದ್ದಿ ವೈರಲ್!; ಹರಿದಾಡಿದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ
ಕೆಲವೇ ದಿನಗಳ ಹಿಂದೆ ರಾಹುಲ್ ಗಾಂಧಿಯವರ ಅಧಿಕೃತ ಖಾತೆಯಿಂದ ಮಾಡಲಾಗಿದೆ ಎನ್ನಲಾದ ಮತ್ತೊಂದು ಟ್ವೀಟ್ ವೈರಲ್ ಆಗಿತ್ತು. ಶಾಲೆ ಮತ್ತು ಕಾಲೇಜುಗಳು ಜೂ.1ರಿಂದ ಸಮ-ಬೆಸ ಮಾದರಿಯಲ್ಲಿ ಶುರುವಾಗಬೇಕು. ಒಂದು ದಿನ ಶಿಕ್ಷಕರು ಬಂದರೆ, ಮತ್ತೊಂದು ದಿನ ಮಕ್ಕಳು ಬರುವಂತೆ ನಿಯಮ ರೂಪಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾಗಿ ವೈರಲ್ ಆಗಿತ್ತು. ಅನೇಕರು ಇದನ್ನು ನೋಡಿ ಟೀಕಿಸಿದ್ದರು. ಆದರೆ ಅದು ಸುಳ್ಳು, ತಿರುಚಲಾದ ಟ್ವೀಟ್ ಎಂಬುದು ನಂತರ ಫ್ಯಾಕ್ಟ್ಚೆಕ್ನಿಂದ ಗೊತ್ತಾಗಿತ್ತು. (ಏಜೆನ್ಸೀಸ್)