ಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆ ಹಾಗೂ ಬೆಂಗಳೂರು ರಂಗಾದೊರೈ ಮೆಮೋರಿಯಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ ನೂತನ ಕಟ್ಟಡ ಶಿಲಾನ್ಯಾಸ ಹಾಗೂ ಒಪಿಡಿ ವಿಭಾಗವನ್ನು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸೋಮವಾರ ಉದ್ಘಾಟಿಸಿದರು.
ರಂಗಾದೊರೈ ಆಸ್ಪತ್ರೆ ನಿರ್ದೇಶಕಿ ಡಾ. ಕಲ್ಪನಾ ಮಾತನಾಡಿ, ರೋಗಿ ಹಾಗೂ ವೈದ್ಯರ ನಡುವೆ ಭಾವನಾತ್ಮಕ ಸಂಬಂಧವಿದ್ದರೆ ರೋಗಿ ಬೇಗ ಗುಣಮುಖನಾಗಲು ಸಾಧ್ಯ. ಶ್ರೀಮಠದ ಉಭಯ ಶ್ರೀಗಳ ಆಶಯದಂತೆ ಇಲ್ಲಿನ ಧನ್ವಂತರಿ ಆಸ್ಪತ್ರೆ ಅಭಿವೃದ್ಧಿಗೆ ರಂಗಾದೊರೈ ಆಸ್ಪತ್ರೆ ಕೈಜೋಡಿಸಲಿದೆ ಎಂದರು.
ಉತ್ತಮ ವೈದ್ಯರು ಬರಬೇಕಾದರೆ ಆಧುನಿಕ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ತುರ್ತು ನಿಗಾ ಘಟಕ ಹಾಗೂ ಆಪರೇಷನ್ ಥಿಯೇಟರ್ಗೆ ಉನ್ನತ ಸಲಕರಣೆಗಳ ಅಗತ್ಯವಿದೆ. ಇಲ್ಲಿನ ದಾದಿಯರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಜನಸಾಮಾನ್ಯರು ಆಸ್ಪತ್ರೆಗೆ ಬರಲು ಉತ್ತಮ ವೈದ್ಯರು, ದಾದಿಯರು, ಟೆಕ್ನಿಶಿಯನ್ಗಳ ಅಗತ್ಯವಿದೆ. ಆಸ್ಪತ್ರೆಗೆ ಬಂದರೆ ನಾವು ಗುಣಮುಖರಾಗುವ ಆತ್ಮವಿಶ್ವಾಸ ಜನಸಾಮಾನ್ಯರಲ್ಲಿ ಮೂಡಿಸಲು ಅವಿರತವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಧನ್ವಂತರಿ ಆಸ್ಪತ್ರೆ ಕಾರ್ಯದರ್ಶಿ ಶೈಲಜಾ ರತ್ನಾಕರ ಹೆಗಡೆ ಮಾತನಾಡಿ, ಎಲ್ಲ ವೈದಕೀಯ ಪರೀಕ್ಷೆಗೆ ಬೇಕಾಗುವ ಸಲಕರಣೆ ಹಾಗೂ ವೈದ್ಯರು ಇಲ್ಲಿ ಲಭ್ಯರಿರಬೇಕು. ಅದಕ್ಕಾಗಿ ನಮ್ಮ ಜತೆ ರಂಗಾದೊರೈ ಆಸ್ಪತ್ರೆ ಕೈಜೋಡಿಸಿದೆ. ಜಗದ್ಗುರುಗಳ ಕೃಪಾಶೀರ್ವಾದದಿಂದ ಆಸ್ಪತ್ರೆ ಉನ್ನತಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.