ಸಾಗರ: ಸಾಗರ ಕ್ಷೇತ್ರದಲ್ಲಿ ಜನರ ನೀರಿಕ್ಷೆಯಂತೆ ಕೆಲಸವಾಗಿಲ್ಲ. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳ ಉದ್ಘಾಟನೆಯೂ ಆಗಿಲ್ಲ. ಶಾಸಕರು ಹರತಾಳು ಹಾಲಪ್ಪ ಅವರು ಬಹಿರಂಗ ಚರ್ಚೆ ಬಂದರೆ ಎಲ್ಲದಕ್ಕೂ ಉತ್ತರ, ಸಲಹೆ ನೀಡುತ್ತೇನೆ ಎಂದು ಸಾಗರ ಕ್ಷೇತ್ರ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಹೇಳಿದರು.
ನಗರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ತಿಂಗಳಿನಲ್ಲಿ ಲೋಕಾರ್ಪಣೆಗೊಳಿಸದಿದ್ದಲ್ಲಿ ಶಾಸಕರ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ. ನಗರ ವ್ಯಾಪ್ತಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಮಂಜೂರಾಗಿದ್ದ ಅನೇಕ ಕಾಮಗಾರಿಗಳ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈಜುಕೊಳ ಮತ್ತು ಒಳಾಂಗಣ ಕ್ರೀಡಾಂಗಣ ಕಾಮಗಾರಿ ಕಳಪೆಯಾಗಿದೆ ಎಂದು ಶಾಸಕರು ಬಹಿರಂಗ ಹೇಳಿಕೆ ನೀಡಿದ್ದರು. ಖಾಸಗಿ ಬಸ್ ನಿಲ್ದಾಣ ಪೂರ್ಣಗೊಂಡಿದ್ದರೂ ಲೋಕಾರ್ಪಣೆ ಮಾಡಿಲ್ಲ. ಸಂತೆ ಮಾರುಕಟ್ಟೆ ಉಪಯೋಗಕ್ಕೆ ಬಾರದಂತಾಗಿದೆ. ಮೀನು ಮಾರುಕಟ್ಟೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದರು.
ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಖ ವೃತ್ತಗಳಲ್ಲಿ ಗೋವಿನ ಚಿತ್ರಗಳನ್ನು ಹಾಕಲಾಗಿದೆ. ಇದು ನಿಜಕ್ಕೂ ಹಾಸ್ಯಾಸ್ಪದ. ಬಿಜೆಪಿಯವರಿಗೆ ಗೋವಿನ ಬಗ್ಗೆ ಕಾಳಜಿ ಇಲ್ಲ. ಬದಲಾಗಿ ಅದನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಅತಿ ಹೆಚ್ಚು ಗೋಮಾಂಸ ರಫ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆಗುತ್ತಿದೆ ಎಂದು ಆರೋಪಿಸಿದರು.
ಕೆಎಸ್ಆರ್ಟಿಸಿ ಸಲಹಾ ಸಮಿತಿ ಮಾಜಿ ಸದಸ್ಯ ಮಹಾಬಲೇಶ್ವರ ಶೇಟ್ ಮಾತನಾಡಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣ ದರದಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿರುವುದು ಖಂಡನೀಯ. ತಕ್ಷಣ ಹಿರಿಯ ನಾಗರಿಕರ ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಸೈಯದ್ ಜಾಕೀರ್, ಪ್ರಮುಖರಾದ ಮಹಮ್ಮದ್ ಖಾಸಿಂ, ಎಲ್.ವಿ.ಸುಭಾಷ್, ಪುಟ್ಟಪ್ಪ, ವಸಂತ ಶೇಟ್, ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.