ದೇವದುರ್ಗ: ತಾಲೂಕಿನ ವಿವಿಧೆಡೆ ಸೋಮವಾರ ತಡರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆಗಳು ಕೊಳೆಯುವ ಭೀತಿ ಎದುರಾಗಿದೆ.
ದೇವದುರ್ಗ ಹೋಬಳಿಯಲ್ಲಿ 40.80 ಮಿ.ಮೀ., ಅರಕೇರಾದಲ್ಲಿ 13, ಗಬ್ಬೂರಿನಲ್ಲಿ 13.11, ಗಲಗನಲ್ಲಿ 28 ಹಾಗೂ ಜಾಲಹಳ್ಳಿಯಲ್ಲಿ 18.20 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಹಂಗಾಮಿಗೆ ರೈತರು ಹತ್ತಿ, ತೊಗರಿ, ಮೆಣಸಿನಕಾಯಿ, ಸೂರ್ಯಕಾಂತಿ, ಸಜ್ಜೆ ಹಾಗೂ ಇತರ ಬೆಳೆಗಳನ್ನು ಬೆಳೆದಿದ್ದು, ಸಲು ಸಮೃದ್ಧವಾಗಿದೆ. ಆದರೆ, ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ತೇವಾಂಶ ಹೆಚ್ಚಾಗಿದೆ. ಜಮೀನಿನಲ್ಲಿ ಒಂದೆರಡು ದಿನ ನೀರು ನಿಂತರೆ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆ ಹಳದಿ ಬಣ್ಣಕ್ಕೆ ತಿರುಗಲಿವೆ. ಕೆಲ ಬೆಳೆ ತೇವಾಂಶ ಹೆಚ್ಚಾಗಿ ಒಣಗುವ ಸಾಧ್ಯತೆಯಿದೆ.