ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ಪೂಜೆ ವಿಚಾರದಲ್ಲಿ ಉಂಟಾದ ವಿವಾದದಿಂದಾಗಿ ದೇವರಮರಿಕುಂಟೆ ಗ್ರಾಮದ ಚಳ್ಳಕೇರಮ್ಮ ದೇವಿಗೆ ಈಗ ನಿತ್ಯ ಪೂಜೆ ಸ್ಥಗಿತಗೊಂಡಿದ್ದು, ದೇಗುಲಕ್ಕೆ ಬೀಗ ಹಾಕಲಾಗಿದೆ.
ಕ್ಷೇತ್ರದ ಶಾಸಕರಿಂದ 10 ಲಕ್ಷ ರೂ. ಅನುದಾನ ಹಾಗೂ ಭಕ್ತ ಮಹೇಶ್ವರಪ್ಪ ನೀಡಿದ 15 ಲಕ್ಷ ರೂ. ದೇಣಿಗೆ ಜತೆಗೆ ಗುಡಿಕಟ್ಟಿನ ಅಣ್ಣತಮ್ಮಂದಿರಿಂದ ಸಂಗ್ರಹಿಸಿದ ಹಣ ಸೇರಿ ಒಟ್ಟು 40 ಲಕ್ಷ ರೂ. ವೆಚ್ಚದಲ್ಲಿ ಸುಂದರವಾಗಿ ನೂತನ ದೇವಸ್ಥಾನ ನಿರ್ಮಿಸಲಾಗಿದೆ. 2020ರ ಫೆಬ್ರವರಿ ತಿಂಗಳಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ 40 ದಿನ ವ್ರತ ಆಚರಿಸಿ ದೇವಸ್ಥಾನ ಲೋಕಾರ್ಪಣೆ ಮಾಡಲಾಗಿತ್ತು.
ಐದಾರು ತಿಂಗಳು ಮಾತ್ರ ಪೂಜಾ ಕಾರ್ಯ ನಡೆಯಿತು. ನಂತರ ಪೂಜಾರಿಕೆ ಮುಂದುವರಿಸಿಕೊಂಡು ಹೋಗುವ ವಿಚಾರದಲ್ಲಿ ಮನೆತನ ಮತ್ತು ಯಜಮಾನಿಕೆ ಸಂಬಂಧ ಉಂಟಾಗಿರುವ ಮನಸ್ತಾಪ ಸೃಷ್ಟಿಯಾಗಿ ಪೂಜೆ ನೀತು ಹೋಗಿದೆ.
ಚಳ್ಳಕೇರಮ್ಮ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ. ಆದರೂ, ಯಾವುದೇ ಅಹಿತಕರ ಘಟನೆ ಆಗಬಾರದು. ಗ್ರಾಮದ ಒಳಿತಿಗಾಗಿ ಪೂಜೆ ಕಾರ್ಯ ನೆರವೇರಲಿ ಎಂಬ ದೃಷ್ಟಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಉಭಯ ಗುಂಪಿನವರ ಅಭಿಪ್ರಾಯ ತಿಳಿದುಕೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.