ಶಿವಮೊಗ್ಗ: ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ, ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಡಿ. ದೇವರಾಜ ಅರಸು ಪ್ರಶಸ್ತಿ ನೀಡುವುದು ಮತ್ತು ಪ್ರಶಸ್ತಿಗಾಗಿ ಅರ್ಹರ ಆಯ್ಕೆಗೆ ಸಮಿತಿ ನೇಮಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮನವಿ ಮಾಡಿದರು.
ನಗರದಲ್ಲಿ ಸಚಿವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಕಳೆದ 3 ವರ್ಷಗಳಿಂದ ದೇವರಾಜ ಅರಸು ಪ್ರಶಸ್ತಿ ನೀಡಿಲ್ಲ. ಈ ಬಾರಿ ಅರಸು ಜನ್ಮದಿನದ ನಿಮಿತ್ತ ಆಗಸ್ಟ್ 20ರಂದು ಮೂರು ವರ್ಷಗಳ ಪ್ರಶಸ್ತಿಯನ್ನು ನೀಡಬೇಕು. ಪ್ರತಿ ಸಾಲಿನ 5 ಲಕ್ಷ ರೂ. ಹಣವನ್ನು ರಾಜ್ಯದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ನೇತಾರರಿಗೆ ಪ್ರಶಸ್ತಿ ರೂಪದಲ್ಲಿ ಕೊಡಬೇಕೆಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶಿಫಾರಸು ಮಾಡುವಂತೆ ಒತ್ತಾಯಿಸಿದರು.
ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ, ಮುಖಂಡರಾದ ಎಚ್.ಎಂ.ಸಂಗಯ್ಯ, ಎಸ್.ವಿ.ರಾಜಮ್ಮ, ಶಂಕ್ರಾನಾಯ್ಕ, ಎಲ್.ಆರ್.ಗೋಪಾಲಕೃಷ್ಣ, ಎಂ.ಎಸ್.ಶ್ರೀಧರ ಶೆಟ್ಟಿ, ಹೇಮಂತಕುಮಾರ್, ವಿ.ರಾಮಯ್ಯ ಇದ್ದರು.