ದೊಂಡಂಬಳಿ, ಮೇದಿನಾಪುರ ಕ್ರಾಸ್ನಲ್ಲಿ ಘಟನೆ
ದೇವದುರ್ಗ: ತಾಲೂಕಿನ ನದಿದಂಡೆ ಗ್ರಾಮಗಳಲ್ಲಿ ಕೃಷ್ಣಾ ನದಿಯಿಂದ ಪರವಾನಗಿ ಇಲ್ಲದೆ ಅನಧಿಕೃತವಾಗಿ ಸಂಗ್ರಹಿಸಿದ್ದ ಮರಳು ಅಡ್ಡೆ ಮೇಲೆ ದೇವದುರ್ಗ ಹಾಗೂ ಜಾಲಹಳ್ಳಿ ಠಾಣೆ ಪೊಲೀಸರು ಗುರುವಾರ ದಾಳಿ ನಡೆಸಿ ಸುಮಾರು 2550 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದಿದ್ದಾರೆ.
ನದಿದಂಡೆ ಗ್ರಾಮ ದೊಂಡಂಬಳಿಯ ಸರ್ಕಾರಿ ಜಾಗದಲ್ಲಿ ಸಂಗ್ರಹಿಸಿದ್ದ 6.63 ಲಕ್ಷ ರೂ. ಮೌಲ್ಯದ 1300 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆಯಲಾಗಿದೆ. ರಮೇಶ ಶಿವಪ್ಪ ದೊಂಡಂಬಳಿ ವಿರುದ್ಧ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಿಎಸ್ಐ ಎಲ್.ಬಿ.ಅಗ್ನಿ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಡಿ ಜಾಲಹಳ್ಳಿ ಸಮೀಪದ ಮೇದಿನಾಪುರ ಕ್ರಾಸ್ ಹತ್ತಿರ ಸರ್ಕಾರಿ ಖಾಲಿ ಜಾಗದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 6.37 ಲಕ್ಷ ರೂ. ಮೌಲ್ಯದ ಸುಮಾರು 1250 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.