ದೇವದುರ್ಗ: ಇಂದಿನ ಕಲುಷಿತ ವಾತಾವರಣದಲ್ಲಿ ಭಕ್ತರಿಗೆ ಆಧ್ಯಾತ್ಮ ಬೋಧನೆ ಅಗತ್ಯವಾಗಿದ್ದು, ಈ ದಿಸೆಯಲ್ಲಿ ಮಠ-ಮಾನ್ಯಗಳ ಪಾತ್ರ ದೊಡ್ಡದಿದೆ. ಭಕ್ತರು ಹಾಗೂ ಸಮಾಜವನ್ನು ಮಠಗಳು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂದು ಕಾಶಿ ಜಗದ್ಗುರು ಶ್ರೀ.ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಗಬ್ಬೂರು ಗ್ರಾಮದ ಸಾವಿರದೇವರ ಸಂಸ್ಥಾನ ಬಿಚ್ಚಾಲಿ ಹಿರೇಮಠದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಚನ್ನವೀರಭದ್ರೇಶ್ವರ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಅವುಗಳನ್ನು ಮರಳಿ ಬಿತ್ತುವ ಕೆಲಸವನ್ನು ಮಠಗಳು ಮಾಡಬೇಕಿದೆ. ಸಮಾಜವನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಮಠಗಳಿಂದ ಸಾಧ್ಯವಿದೆ ಎಂದರು.
ಕಲ್ಯಾಣ ಮಂಟಪ ನಿರ್ಮಾಣ ಶಾಸಕ ಕೆ.ಶಿವನಗೌಡ ನಾಯಕ ವೈಯಕ್ತಿಕವಾಗಿ ಅನುದಾನ ನೀಡಿದ್ದು ಶ್ಲಾಘನೀಯ. ಮಠದ ಕಲ್ಯಾಣ ಮಂಟಪದಿಂದ ಬಡವರಿಗೆ ಅನುಕೂಲವಾಗಲಿದೆ. ಶ್ರೀವೀರಭದ್ರ ಶಿವಾಚಾರ್ಯರ ಮಠಗಳು ಜಿಲ್ಲೆಯ ವಿವಿಧ ಕಡೆಯಿದ್ದು, ಭಕ್ತರು ಮಠಗಳನ್ನು ಮುನ್ನಡೆಸುತ್ತಿದ್ದಾರೆ. ಭಕ್ತರಿಂದ ನಡೆಯುವ ಮಠಗಳು, ಸದಾ ಕಾಲ ಭಕ್ತರ ಒಳಿತಿಗಾಗಿ ಸೇವೆ ಮಾಡುತ್ತಿವೆ ಎಂದು ಜಗದ್ಗುರುಗಳು ಹೇಳಿದರು.