ದೇವದುರ್ಗ: ಸಮಾಜದ ಅಂಕುಡೊಂಕು ತಿದ್ದುವ ಜತೆಗೆ ಸಾಮರಸ್ಯದ ಜೀವನ ನಡೆಸುವ ಬಗ್ಗೆ ವಚನಗಳ ಮೂಲಕ ಜನರಿಗೆ ಬೋಧನೆ ಮಾಡಿದ್ದಾರೆ. ಶರಣರ ವಚನಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಹೇಳಿದರು. ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾಯಕ ವಚನಕಾರರ ಜಯಂತಿಯಲ್ಲಿ ಶನಿವಾರ ಮಾತನಾಡಿದರು.
ಮಾದರ ಚನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಕಾಯಕ ಶರಣರು ಎಂದು ಗುರುತಿಸಿಕೊಂಡಿದ್ದಾರೆ. ಕಾಯಕದಿಂದಲೇ ತಮ್ಮ ಜೀವನ ಆದರ್ಶಮಯವಾಗಿ ರೂಪಿಸಿದ್ದಾರೆ.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ಎಚ್.ಶಿವರಾಜ ಮಾತನಾಡಿ, ಬಸವಾದಿ ಶರಣರು ಸಮಾಜಕ್ಕೆ ವಚನಗಳ ಮೂಲಕವೇ ಸಂದೇಶ ನೀಡಿದ್ದಾರೆ. ಕಾಯಕವೇ ಅವರ ಮೂಲಮಂತ್ರವಾಗಿತ್ತು. ದಲಿತ ವಚನಕಾರರು ಕಾಯಕದ ಜತೆಗೆ ವಚನಗಳನ್ನು ರಚಿಸಿ ಆದರ್ಶ ತತ್ವಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಶಿಕ್ಷಣದಿಂದಲೇ ಪ್ರತಿಯೊಂದು ಸಮುದಾಯ ಅಭಿವೃದ್ಧಿ ಸಾಧ್ಯ. ಇದನ್ನು ಅನೇಕರು ಸಾಬೀತು ಮಾಡಿದ್ದಾರೆ ಎಂದರು.
ಶಿರಸ್ತೇದಾರ್ ಗೋವಿಂದ ನಾಯಕ್, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಸಿಬ್ಬಂದಿ ರವಿಕುಮಾರ್, ಗ್ರಾಮ ಸಹಾಯಕ ದಂಡಪ್ಪ ಇತರರಿದ್ದರು.