ದೇವದುರ್ಗ: ಕಲ್ಯಾಣ ಕರ್ನಾಟಕದಲ್ಲಿ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡಲು ಒತ್ತಾಯಿಸಿ ಪಟ್ಟಣದಲ್ಲಿ ಕಸಾಪದಿಂದ ಮಂಗಳವಾರ ಪತ್ರ ಚಳವಳಿ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ರಾಯಚೂರು ಎಲ್ಲ ರಂಗಗಳಲ್ಲಿ ಹಿಂದುಳಿದ ಜಿಲ್ಲೆಯಾಗಿದೆ. ಮೂಲಸೌಕರ್ಯ, ಶಿಕ್ಷಣ, ಉದ್ಯೋಗದಲ್ಲಿ ಅತ್ಯಂತ ಹಿಂದುಳಿದಿದ್ದು, ಬಡತನ, ಅನಕ್ಷರತೆ ಹೆಚ್ಚುತ್ತಿದೆ. ಈ ಭಾಗದ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಇದಕ್ಕೆ ಪ್ರಮುಖ ಕಾರಣ ಎಂದು ದೂರಿದರು.
ರಾಯಚೂರಿಗೆ ಐಐಟಿ ಮಂಜೂರು ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಕೆಲ ರಾಜಕೀಯ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿ ಧಾರಾವಾಡ ಜಿಲ್ಲೆಗೆ ಐಐಟಿ ಕೇಂದ್ರ ಕೊಂಡೊಯ್ದರು. ಇದರಿಂದ ಈ ಭಾಗಕ್ಕೆ ಭಾರಿ ಅನ್ಯಾಯವಾಗಿದೆ. ಈಗ ಕೇಂದ್ರ ಸರ್ಕಾರ ರಾಜ್ಯದಲ್ಲಿ ಏಮ್ಸ್ ಮಂಜೂರಾತಿಗೆ ಒಪ್ಪಿದ್ದು, ರಾಜ್ಯ ಸರ್ಕಾರ ಕೇಂದ್ರಕ್ಕೆ ರಾಯಚೂರು ಜಿಲ್ಲೆಯ ಒಂದೇ ಹೆಸರು ಶಿಫಾರಸು ಮಾಡಬೇಕು. ಈ ಮೂಲಕ ಐಐಟಿಯಲ್ಲಾದ ಅನ್ಯಾಯ ಸರಿಪಡಿಸಬೇಕು ಎಂದು ರಂಗಣ್ಣ ಪಾಟೀಲ್ ಅಳ್ಳುಂಡಿ ಆಗ್ರಹಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬರೆದ ಪತ್ರವನ್ನು ಪೋಸ್ಟ್ ಮಾಡಲಾಯಿತು. ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ನರಸಿಂಗ್ರಾವ್ ಸರ್ಕಿಲ್, ಎಚ್.ಶಿವರಾಜ, ಪ್ರಮುಖರಾದ ಹನುಮಂತ ಮನ್ನಾಪುರ, ಭೋಜರಾಜ ಮಿಣಜಿಗಿ, ರಾಜು ಬಾಗೂರು, ಇಕ್ಬಾಲ್ ಸಾಬ್, ಶ್ರೀನಿವಾಸ್, ಮರಿಯಪ್ಪ ರಾಯಚೂರಕರ್, ಶಿವಕುಮಾರ ಛಲವಾದಿ, ಶಾಂತಕುಮಾರ ಇತರರಿದ್ದರು.