ದೇವದುರ್ಗ: ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸುವ ಯುಜಿಸಿ ಅಧ್ಯಕ್ಷರ ಹೇಳಿಕೆ ಖಂಡಿಸಿ ಹಾಗೂ ಪರೀಕ್ಷೆ ಪ್ರಸ್ತಾಪ ಕೈಬಿಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಗ್ರೇಡ್-2 ತಹಸೀಲ್ದಾರ್ ವೆಂಕಟೇಶಗೆ ಎಸ್ಎಫ್ಐ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಬೇಕಾದ ರಾಜ್ಯ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಮುಂದಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಲಿದೆ. ಬೆಂಗಳೂರಿನಲ್ಲಿ ಯುಜಿಸಿ ಅಧ್ಯಕ್ಷರು ವಿಶ್ವವಿದ್ಯಾಲಯದ ಕುಲಪತಿಗಳ ಸಭೆಯಲ್ಲಿ ಪದವಿ ಹಂತದ ಬಿಎ, ಬಿಕಾಂ, ಬಿಎಸ್ಸಿ ವಿಭಾಗಕ್ಕೆ ನೀಟ್ ಮಾದರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ದೂರಿದರು.
ಈ ಮೊದಲು ಬಿಎ, ಬಿಕಾಂ ಬಿ.ಎಸ್ಸಿ ಹಾಗೂ ಇತರ ಕೋರ್ಸ್ಗಳಿಗೆ ಪಿಯುಸಿ ಅಂಕಗಳ ಆಧಾರದ ಮೇಲೆ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ಪರೀಕ್ಷೆ ಕಡ್ಡಾಯ ಮಾಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಉನ್ನತ ಶಿಕ್ಷಣ ಕಲಿಯುವವರ ಸಂಖ್ಯೆ ಶೇ.20ರಷ್ಟಿದ್ದು, ಪ್ರವೇಶ ಪರೀಕ್ಷೆಯಿಂದ ಈ ಸಂಖ್ಯೆ ಕುಸಿಯಲಿದೆ. ಹೀಗಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕೈಬಿಡಬೇಕು. ಹಿಂದಿನ ಪದ್ಧತಿಯಂತೆ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಬಾಬು ಶ್ಯಾನರದೊಡ್ಡಿ, ಬಾಷಾಸಾಬ್ ಶ್ಯಾನರದೊಡ್ಡಿ, ಸತೀಶ್, ಪಕೀರಣ್ಣ, ಸಿಐಟಿಯು ಸದಸ್ಯೆ ಶಕುಂತಲಾ ದೇಸಾಯಿ ಇತರರಿದ್ದರು.