ದೇವದುರ್ಗ: ಕೃಷ್ಣಾ ನದಿ ಪ್ರವಾಹದಿಂದ ತಾಲೂಕಿನ ನದಿದಂಡೆ ಗ್ರಾಮಗಳಲ್ಲಿ ನೆರೆ ಆತಂಕ ಎದುರಾಗಿದೆ. ನಾರಾಯಣಪುರ ಜಲಾಶಯದಿಂದ ಶನಿವಾರ ಬೆಳಗ್ಗೆ 26 ಕ್ರಸ್ಟ್ಗೇಟ್ ಮೂಲಕ 2.21 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ಹೂವಿನಹೆಡಗಿಯ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಹೂವಿನಹೆಡಗಿ ಸೇತುವೆ ಮೇಲ್ಭಾಗಕ್ಕೆ ಹೊಂದಿಕೊಂಡು ನೀರು ಹರಿಯುತ್ತಿದ್ದು, ಇನ್ನೂ 10ರಿಂದ 15 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾದರೆ ಸೇತುವೆ ಮುಳುಗಡೆಯಾಗಲಿದೆ. ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನದ ಸಮೀಪ ನೀರು ಬಂದಿದೆ. ಗೂಗಲ್ ಶ್ರೀ ಅಲ್ಲಮಪ್ರಭುದೇವಸ್ಥಾನ ಸುತ್ತ ನೀರು ಆವರಿಸಿದ್ದು, ಮೆಟ್ಟಿಲುಗಳು ಮುಳುಗಡೆಯಾಗಿವೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ಸುಮಾರು 64 ಗೇಟ್ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ.
ನದಿದಂಡೆ ಗ್ರಾಮಗಳ ರೈತರಲ್ಲಿ ಆತಂಕ ಮನೆ ಮಾಡಿದೆ. ಬಹುತೇಕ ರೈತರ ಜಮೀನಿನ ಬದುವಿನವರೆಗೆ ನೀರು ಬಂದಿದ್ದು, ನದಿಗೆ ಇನ್ನೂ ಸ್ವಲ್ಪ ಹೆಚ್ಚು ನೀರು ಬಂದರೆ ಜಮೀನಿಗೆ ನೀರು ನುಗ್ಗಲಿದೆ. ಇದರಿಂದ ರೈತರಲ್ಲಿ ಬೆಳೆ ಹಾನಿ ಭೀತಿ ಆವರಿಸಿದೆ.