ಹುಬ್ಬಳ್ಳಿ: ಗೋಕುಲ ಕೈಗಾರಿಕಾ ಪ್ರದೇಶದ ಗೋಡೌನ್ ಒಂದರಿಂದ 5 ಲಕ್ಷ ರೂ. ಮೌಲ್ಯದ ಟಯರ್, ಟ್ಯೂಬ್ ಕಳವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕುಲ ರೋಡ್ ಠಾಣೆ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ.
ಇಲ್ಲಿನ ಮಾರುತಿ ನಗರ ನಿವಾಸಿ ಹಳ್ಳೆಪ್ಪ ಪೂಜಾರ ಹಾಗೂ ಗದಗ- ಬೆಟಗೇರಿ ನರಸಾಪುರ ಗ್ರಾಮದ ವಸೀಮ ಸೈದಾಪುರ ಬಂಧಿತ ಆರೋಪಿಗಳು. ಬಂಧಿತರಿಂದ 2.10 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಸಹಚರರು ತಲೆಮರೆಸಿಕೊಂಡಿದ್ದಾರೆ. ಶಂಕರ ಹಿರೇಮಠ ಎಂಬುವರಿಗೆ ಸೇರಿದ ಶಿವಶಕ್ತಿ ಎಂಟರ್ಪ್ರೖೆಸಸ್ ಗೋಡೌನ್ನ ಮೇಲ್ಛಾವಣಿಯ ಸಿಮೆಂಟ್ ಶೀಟಿನ ನಟ್, ಬೋಲ್ಟ್ಗಳನ್ನು ಬಿಚ್ಚಿ ಕೆಳಗೆ ಇಳಿದಿದ್ದರು. 5,78,345 ರೂ. ಮೌಲ್ಯದ 131 ಸಿಯೆಟ್ ಕಂಪನಿಯ ಟಯರ್ಗಳು, 108 ಟ್ಯೂಬ್ಗಳು ಹಾಗೂ 12 ಪ್ಲ್ಯಾಪ್ಗಳನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿತ್ತು.
24 ಗಂಟೆಗಳಲ್ಲಿ ಕಾರ್ಯಾಚರಣೆ: ಎಸಿಪಿ ವಿನೋದ ಮುಕ್ತೇದಾರ ಮಾರ್ಗದರ್ಶನದಲ್ಲಿ ಗೋಕುಲ ರೋಡ್ ಠಾಣೆ ಇನ್ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ 24 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಎಎಸ್ಐ ಎಚ್.ಎನ್. ವೆಂಕಣ್ಣವರ, ಸಿಬ್ಬಂದಿ ಬಸವರಾಜ ಬೆಳಗಾವಿ, ರಾಜು ಹೊಂಕಣದವರ, ಮಹಾದೇವ ಹೊನ್ನಪ್ಪನವರ, ಸುಲೇಮಾನ ಚೋಪದಾರ, ಮಹೇಶ ಬೆನ್ನೂರ, ಸಂಜೀವರೆಡ್ಡಿ ಕಣಬೂರ ತಂಡದಲ್ಲಿದ್ದರು. ಈ ತಂಡಕ್ಕೆ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.