More

    ನಗರದಲ್ಲಿ 1,052 ಮತಗಟ್ಟೆಗಳಿಗೆ ಸ್ವಯಂಸೇವಕರ ನಿಯೋಜನೆ

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ 1,052 ಮತಗಟ್ಟೆಗಳಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳನ್ನು ಸ್ವಯಂಸೇವಕರಾಗಿ ನಿಯೋಜನೆ ಮಾಡಲಾಗಿದೆ.

    ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸ್ವಯಂಸೇವಕರಿಗೆ ಹಮ್ಮಿಕೊಂಡಿದ್ದ ಸರದಿ ನಿರ್ವಹಣಾ ತರಬೇತಿಗೆ ಶನಿವಾರ ಚಾಲನೆ ನೀಡಿದ ಬಳಿಕ ಮಾತನಾಡಿದ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಎಲ್ಲ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಮುಂದೆ ಬಂದಿರುವುದು ಸಂತಸದ ವಿಷಯ. ಮತದಾನದ ದಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಮೊದಲು ತಾವು ತಪ್ಪದೇ ಮತ ಚಲಾಯಿಸಿ ಬಳಿಕ ಸ್ವಯಂಸೇವಕರಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

    ನಗರದಲ್ಲಿ ಸುಮಾರು 1,052 ಮತಗಟ್ಟೆಗಳಿಗೆ ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗುತ್ತಿದ್ದು, ಸ್ವಯಂ ಸೇವಕರು ಸರತಿ ಸಾಲಿನ ಸ್ಥಿತಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯ ಕುರಿತು ತಂತ್ರಾಂಶದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಅಪ್‌ಡೇಟ್ ಮಾಡುತ್ತಿರಬೇಕು. ಅದನ್ನು ನೋಡಿಕೊಂಡು ಮತದಾರರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸ್ವಯಂಸೇವಕರು ಸರತಿ ಸಾಲಿನ ಸ್ಥಿತಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳುವುದರ ಜತೆಗೆ ಮತಗಟ್ಟೆಗಳಿಗೆ ಬರುವ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗರ್ಭಿಣಿಯರಿಗಾಗಿ ಸ್ಥಾಪಿಸಿರುವಂತಹ ಪ್ರತ್ಯೇಕ ಸಾಲಿನಲ್ಲಿ ಕಳುಹಿಸಿ ಮತದಾನ ಮಾಡಿಸುವ ಕೆಲಸ ಮಾಡಬೇಕು ಎಂದು ತುಷಾರ್ ಗಿರಿನಾಥ್ ತಿಳಿವಳಿಕೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್. ಕಾಂತರಾಜು, ಬೆಂಗಳೂರು ನಗರ ಸ್ವೀಪ್ ನೋಡಲ್ ಅಧಿಕಾರಿ ಅನಿತಾ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ದೇವರಾಜ್ ಸೇರಿ ಇನ್ನಿತರ ಅಧಿಕಾರಿಗಳಿದ್ದರು.

    ಸ್ವಯಂಸೇವಕರಿಗೆ ಪ್ರಶಸ್ತಿ ವಿತರಣೆ:

    ಈ ಬಾರಿಯ ಲೋಕಸಭಾ ಚುನಾವಣೆಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ 100 ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕಾಗಿ ಉಪಯೋಗವಾಗುವಂತೆ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts