ಕಾರವಾರ: ಆದಾಯ ತೆರಿಗೆ ಇಲಾಖೆ ಆಧಿಕಾರಿ ಎಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ವ್ಯಕ್ತಿಯನ್ನು ಕಾರವಾರ ನಗರ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಮೂಲದ ಪ್ರಶಾಂತ್ ಬಂಧಿತ ವ್ತಕ್ತಿ. ಆರೋಪಿಯಿಂದ ಪೊಲೀಸರು 5.95 ಲಕ್ಷ ನಗದು, 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಕಾರವಾರದ ವಿನೋದ್ ನಾಯ್ಕ ಎಂಬುವವರಿಗೆ ಐಟಿ ಅಧಿಕಾರಿ ಎಂದು ಪರಿಚಯಿಸಿಕೊಂಡು ಪೆಪ್ಸಿ ಕಂಪನಿಯ ಉತ್ಪನ್ನಗಳ ಹಂಚಿಕೆ ಗುತ್ತಿಗೆ ಕೊಡಿಸುತ್ತೇನೆ. ಇದಕ್ಕಾಗಿ ಕಂಪನಿಗೆ 15 ಲಕ್ಷ ರೂ. ಪಾವತಿಸಬೇಕು ಎಂದು ಹೇಳಿ ಮುಂಗಡವಾಗಿ ಆತನಿಂದ ಒಂದು ಲಕ್ಷ ರೂಪಾಯಿ ಹಣ ಪಡೆದಿದ್ದ.
ಅಲ್ಲದೆ ಕೊಪ್ಪಳ, ಮಂಗಳೂರು, ಉಡುಪಿ, ಮೈಸೂರು, ಹಾವೇರಿ, ಶಿವಮೊಗ್ಗದಲ್ಲೂ ಇದೇ ರೀತಿ ವಂಚನೆ ಎಸಗಿ ಹಣ ದೋಚಿ ಪರಾರಿಯಾಗಿದ್ದ. ಆರೋಪಿ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)