ಶಿವಮೊಗ್ಗ: ನಗರದ ಬಾಲರಾಜ ಅರಸ್ ರಸ್ತೆಯ ಶೌಚಗೃಹ ಸಮೀಪ ಅನಾಥವಾಗಿ ಫುಟ್ಪಾತ್ ಮೇಲೆ ಮಲಗಿದ್ದ ಗ್ಯಾಂಗ್ರಿನ್ ಪೀಡಿತ ಮಹಿಳೆಯನ್ನು ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾಂತ್ವನ ಮಹಿಳಾ ಕೇಂದ್ರದ ಮೇಲ್ವಿಚಾರಕರು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ತೋರಿದ್ದಾರೆ.
ಹೊಸಮನೆ ನಿವಾಸಿ ಭೂಮಿ ಎಂಬುವವರು 10 ವರ್ಷದ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದರು. ಇದ್ದೊಬ್ಬ ಮಗನೂ ಆರೈಕೆ ಮಾಡಲಿಲ್ಲ. ಕಾಲಿಗೆ ಗ್ಯಾಂಗ್ರೀನ್ ತಗುಲಿತು. ಮಾಲೀಕರು ಮನೆ ಖಾಲಿ ಮಾಡಿಸಿದರು. ಈ ಮಹಿಳೆ ಅಕ್ಷರಶಃ ಬೀದಿಗೆ ಬಿದ್ದರು. ಗ್ಯಾಂಗ್ರಿನ್ ಚಿಕಿತ್ಸೆಗೆಂದು ಮೆಗ್ಗಾನ್ಗೆ ದಾಖಲಾದರೆ ಅಲ್ಲಿ ಪರಿಪೂರ್ಣ ಚಿಕಿತ್ಸೆ ದೊರೆಯಲಿಲ್ಲ.
ಅಲ್ಲಿಂದ ಹೊರಬಂದು ಹಾದಿ ಬೀದಿಯಲ್ಲೇ ಬದುಕು ಸವೆಸತೊಡಗಿದರು. ಕೆಲ ಸಮಯ ಖಾಸಗಿ ಬಸ್ ನಿಲ್ದಾಣದಲ್ಲಿ ರಾತ್ರಿ ಉಳಿದರು. ಆದರೆ ಅಲ್ಲಿ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ಆಟೋವೊಂದರಲ್ಲಿ ಬಾಲರಾಜ ಅರಸ್ ರಸ್ತೆಗೆ ತೆರಳಿ ಅಲ್ಲಿಯೇ ಫುಟ್ಪಾತ್ನಲ್ಲೇ ಕೆಲ ತಿಂಗಳಿನಿಂದ ಮಲಗಿದ್ದರು.
ಮಾಧ್ಯಮದವರು ಸೋಮವಾರ ನೀಡಿದ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರಾದ ಆಶಾ, ರೇಖಾ, ಸಾಂತ್ವನ ಕೇಂದ್ರದ ಗಾಯತ್ರಿ, ರಮ್ಯಶ್ರೀ ಸ್ಥಳಕ್ಕೆ ಬಂದು ಆಂಬ್ಯುಲೆನ್ಸ್ನಲ್ಲಿ ಮಹಿಳೆಯನ್ನು ಮೆಗ್ಗಾನ್ಗೆ ಕರೆದೊಯ್ದರು.