ವಿಜಯಪುರ: ಕೃಷಿ ಇಲಾಖೆಯಲ್ಲಿ 33 ವರ್ಷಗಳಿಂದ ಸಿಬ್ಬಂದಿ ಭರ್ತಿ ಮಾಡಿಲ್ಲ. ಹಾಗಾಗಿ ಇದ್ದ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಜತೆಗೆ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ ಹೇಳಿದರು.
ಜಿಲ್ಲೆಯ ಕೃಷಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹಾಗೂ ಜಿಪಂ ಸಿಇಒ ಗೋವಿಂದ ರಡ್ಡಿ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮುಂಗಾರು, ಹಿಂಗಾರು ಹಂಗಾಮುಗಳಲ್ಲಿ ರಿಯಾಯಿತಿಯಲ್ಲಿ ಬಿತ್ತನೆ ಬೀಜ ವಿತರಣೆ, ಮಣ್ಣಿನ ಸತ್ವ ಹೆಚ್ಚಿಸುವುದು, ಹನಿ ಮತ್ತು ತುಂತುರು ನೀರಾವರಿ ಘಟಕಗಳ ವಿತರಣೆ, ಕೃಷಿ ಯಾಂತ್ರಿಕರಣ, ರೈತಸಿರಿ, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ, ಶೂನ್ಯ ಬಂಡವಾಳ ಕೃಷಿ, ಪಿಎಂ ಕಿಸಾನ್, ಗುಣ ನಿಯಂತ್ರಣ, ಸಲ್ ಬಿಮಾ, ಬೆಳೆಹಾನಿ ಸಮೀಕ್ಷೆ ಜತೆಗೆ ಜಲಾನಯನ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಂದಾಯ ಇಲಾಖೆ ಬೆಳೆ ಸಮೀಕ್ಷೆ, ಕೃಷಿ ಮಾರುಕಟ್ಟೆ ಇಲಾಖೆಯ ಕನಿಷ್ಠ ಬೆಂಬಲ ಬೆಲೆ ಯೋಜನೆ, ಅಂಕಿಸಂಖ್ಯೆ ಇಲಾಖೆಯ ಬೆಳೆ ಕಟಾವು ಪ್ರಯೋಗಗಳು, ಪಂಚಾಯತ್ ರಾಜ್ ಇಲಾಖೆಯ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೀಗೆ ವಿವಿಧ ಇಲಾಖೆಗಳ ಕೆಲಸಗಳನ್ನು ಕೃಷಿ ಇಲಾಖೆ ಸಿಬ್ಬಂದಿ ಮಾಡಬೇಕಿದೆ. ಈಗಿರುವ ಕೆಲವೇ ಸಿಬ್ಬಂದಿಗೆ ಕೆಲಸ ಹೊರೆ ಹೆಚ್ಚಾಗಿದೆ. ಕಾರಣ ಸಿಬ್ಬಂದಿ ನೇಮಕ ಮಾಡಬೇಕೆಂದು ಅವರು ವಿವರಿಸಿದರು.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ. ಶಿವಕುಮಾರ, ಉಪಕೃಷಿ ನಿರ್ದೇಶಕ ಪ್ರಕಾಶ ಚವಾಣ್, ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕರಾದ ಎಚ್.ಬಿ. ಪಡಸಲಗಿ, ಎಂ.ಎಚ್. ಯರಝರಿ, ಮಹಾದೇವಪ್ಪ ಯವೂರ, ಜಿ.ಎ. ಕುಲಕರ್ಣಿ, ಎಸ್.ಸಿ. ಪಾಟೀಲ, ಎ.ಪಿ. ಬಿರಾದಾರ, ಎಸ್.ಎ. ಇನಾಮದಾರ್, ಎಸ್.ವಿ. ದೊಡಮನಿ, ಆರೀಾ ಅತ್ತಾರ್, ಕೃಷಿ ಅಧಿಕಾರಿಗಳಾದ ಎಸ್.ಡಿ. ಭಾವಿಕಟ್ಟಿ, ಎನ್.ಬಿ. ಪಾಟೀಲ, ರಾಜೇಶ್ವರಿ ನಾಡಗೌಡ, ಜಯಪ್ರದಾ ದಶವಂತ, ಬಿ.ಆರ್. ಬೋರಗಿ, ಟಿ.ಎ. ಸೋಲಾಪುರಕರ, ಲಕ್ಷ್ಮಿ ಕಾಮಗೊಂಡ, ಸಹಾಯಕ ಕೃಷಿ ಅಧಿಕಾರಿಗಳಾದ ಅರವಿಂದ ಹೂಗಾರ, ಅಮರಪ್ಪ ಚಲವಾದಿ, ಸೋಮಶೇಖರ ಜತ್ತಿ, ಆರ್.ಎಂ. ಬಿದರಿ, ಜಿಲ್ಲಾ ಲಿಪಿಕ ನೌಕರರ ಸಂಘದ ಅಧ್ಯಕ್ಷ ಸುರೇಶ ಬಿರಾದಾರ, ಪದಾಧಿಕಾರಿ ಕಾಸಿಂಸಾಬ ಮಸಳಿ, ಪಿ.ಎಂ. ಪಾಟೀಲ, ಜುಬೇರ್ ಕೆರೂರ, ಅರ್ಜುನ ಲಮಾಣಿ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.