ಬೆಂಗಳೂರು: ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ ಡೆಂಟಲ್ ಡಾಕ್ಟರ್ ರೇವಂತ್ ಪ್ರಕರಣ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ವೈದ್ಯ ರೇವಂತ್ ಆತ್ಮಹತ್ಯೆಗೂ ಮುನ್ನ ತನ್ನ ಪತ್ನಿ ಚಿನ್ನಾಭರಣಗಳನ್ನು ತನ್ನ ಪ್ರಿಯತಮೆ ಹರ್ಷಿತಾಗೆ ಕೊರಿಯರ್ ಮಾಡಿದ್ದು ಈಗ ಪತ್ತೆಯಾಗಿದೆ. ಕೊರಿಯರ್ನಲ್ಲಿ ಬಂದಿದ್ದ ಚಿನ್ನಾಭರಣಗಳನ್ನು ಕಡೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರಿನ ರಾಜರಾಜೇಶ್ವರಿನಗರ ಹಾಗೂ ಕಡೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿಯನ್ನು ಕೊಲೆ ಮಾಡುವ ದಿನ ರೇವಂತ್ ಆಕೆಯನ್ನು ಜ್ಯುವೆಲರಿ ಶಾಪ್ಗೆ ಕರೆದೊಯ್ದಿದ್ದ. ಶಾಪ್ನಲ್ಲಿ ಮಗುವಿಗೆ ಬೆಳ್ಳಿಯ ವಳ್ಳೆ ಕೊಡಿಸಿದ್ದ. ಜ್ಯುವೆಲರಿ ಶಾಪ್ನಿಂದ ಮಧ್ಯಾಹ್ನ 3:22ಕ್ಕೆ ಮನೆಗೆ ಬಂದಿದ್ದ ರೇವಂತ್, ಪತ್ನಿ ಕವಿತಾಗೆ ಎರಡು ಕಡೆ ಇಂಜೆಕ್ಟ್ ಮಾಡಿದ್ದ. ಬಳಿಕ ಕಾರ್ ಶೆಡ್ಗೆ ಎಳೆದುಕೊಂಡು ಹೋಗಿ ಕುತ್ತಿಗೆ ಕುಯ್ದಿದ್ದ.
ಬಳಿಕ ಮನೆಯಲ್ಲಿದ್ದ ಒಡವೆ ತಗೊಂಡು ಹೋಗಿದ್ದ. ಬಳಿಕ ಪೊಲೀಸ್ ಠಾಣೆಗೆ ದರೋಡೆಕೋರರು ಕೊಲೆ ಮಾಡಿ, ಆಭರಣ ದೋಚಿದ್ದಾರೆ ಎಂದು ದೂರು ನೀಡಿ ಮೊಸಳೆ ಕಣ್ಣೀರು ಹಾಕಿದ್ದ.
ಅಕ್ರಮ ಸಂಬಂಧ: ಹರ್ಷಿತಾ ಎಂಬಾಕೆ ಜತೆ ರೇವಂತ್ ಅಕ್ರಮ ಸಂಬಂಧ ಹೊಂದಿದ್ದ. ಈ ಸಂಬಂಧ ಉಳಿಸಿಕೊಳ್ಳಲು ಪತ್ನಿ ಕೊಲೆ ಮಾಡಿದ್ದ. ಆದರೆ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ರೇವಂತ್ ಆತ್ಮಹತ್ಯೆಯ ಸುದ್ದಿ ಕೇಳಿ ಹರ್ಷಿತಾ ಕೂಡ ಬೆಂಗಳೂರಿನ ರಾಜರಾಜೇಶ್ವರಿ ನಗರದ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. (ದಿಗ್ವಿಜಯ ನ್ಯೂಸ್)