ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಜೀವ ವಿಮಾ ನಿಗಮದ ಮಡಿಕೇರಿ ಒಕ್ಕೂಟದ ವತಿಯಿಂದ ನಗರದ ಜೀವ ವಿಮಾ ನಿಗಮದ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಎಲ್ಐಸಿ ಪ್ರತಿನಿಧಿಗಳು ಹಾಗೂ ಪಾಲಿಸಿದಾರರ ಹಿತರಕ್ಷಣೆಗಾಗಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿನಿಧಿಗಳಿಗೆ ಈಗ ಇರುವ 3 ಲಕ್ಷ ಗ್ರಾಚ್ಯುಟಿಯನ್ನು 6 ಲಕ್ಷಕ್ಕೆ ಏರಿಸಬೇಕು. 10 ಲಕ್ಷವಿರುವ ಗ್ರೂಪ್ ಇನ್ಶ್ಯೂರೆನ್ಸ್ ಅನ್ನು 20 ಲಕ್ಷಕ್ಕೆ ಏರಿಸಬೇಕು.
ಸದ್ಯ ವಯಸ್ಸಿನ ಮಿತಿ 69 ಇದ್ದು, ಅದನ್ನು ರದ್ದುಗೊಳಿಸಿ ಏಜೆಂಟ್ ಕೆಲಸ ಮಾಡುವಷ್ಟು ದಿನಗಳವರೆಗೆ ಪರಿಗಣನೆಗೆ ತೆಗೆದುಕೊಂಡು 20 ಲಕ್ಷ ನೀಡಬೇಕು. ಪಾಲಿಸಿದಾರರಿಗೆ 4.25% ಸೇವಾ ತೆರಿಗೆ ಇದ್ದು, ಸಂಪೂರ್ಣವಾಗಿ ತೆಗೆದುಹಾಕಿ ಜಿಎಸ್ಟಿ ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ನಾಚಪ್ಪ, ಕಾರ್ಯದರ್ಶಿ ಭೀಮಯ್ಯ, ಪ್ರಮುಖರಾದ ಸವಿತಾ ಹಾಗೂ ಎಲ್ಐಸಿ ಪ್ರತಿನಿಧಿಗಳು ಇದ್ದರು.